Sunday, February 19, 2017

ಬಾಲ್ಯದ ನೆನಪುಗಳು 1...

ಈಗೀಗ ಎಲ್ಲೇ ಹೋಗ್ಬೇಕು ಅಂದ್ರೆ ಕಾರು, ಬೈಕ್ ಅಥವಾ ಆಟೋ ಮೊರೆ ಹೋಗ್ತೀವಿ. ಆದ್ರೆ ನಾವು ಸಣ್ಣವರಿದ್ದಾಗ ಬಹುತೇಕ ಎಲ್ರೂ ನಡ್ಕೊಂಡೇ ಹೋಗ್ತಾ ಇದ್ದಿದ್ದು. ಸಾಮಾನ್ಯವಾಗಿ ನಾಲ್ಕೈದು ಕಿಲೋ ಮೀಟರ್‌ಗಳನ್ನು ನಡ್ಕೊಂಡೇ ಹೋಗ್ತಿದ್ವಿ. ಅದು ಆಗ ತುಂಬಾ ದೂರ ಅಂತ ಅನ್ನಿಸ್ತಾನೂ ಇರ್ಲಿಲ್ಲ. ದೂರದ ಊರುಗಳಿಗೆ ಹೋಗ್ಬೇಕು ಅಂದ್ರೆ ಮಾತ್ರ ಬಸ್‌ಗಳನ್ನು ಅವಲಂಬಿಸ್ತಿದ್ವಿ. ಅದು ಬಿಟ್ಟು ಅಕ್ಕ ಪಕ್ಕದ ಊರುಗಳಿಗೆ ಹೋಗೋಕೆ ಜೀಪ್, ಟೆಂಪೋ, ಅಂಬಾಸಿಡರ್ ಕಾರುಗಳು.. ಒಂದರ್ಧ ಕಿಲೋ ಮೀಟರ್ ಉದ್ದಕ್ಕೆ ಹೊಗೆ ಬಿಡುವ ಕಪ್ಪು ಬಣ್ಣದ ಆಟೋ ರಿಕ್ಷಾಗಳು.. ಟೆಂಪೋದಲ್ಲಿ ಹೋಗ್ಬೇಕಂದ್ರೆ, ಜನ ಫುಲ್ ಆಗ್ಬೇಕು, ಅಷ್ಟೊತ್ತು ಕಾಯ್ಲೇ ಬೇಕು. ಆ ಟೆಂಪೋಗೊಬ್ಬ ಕಂಡಕ್ಟರ್.. ಟೆಂಪೋ ಸ್ಟಾರ್ಟ್ ಆಗಿಯೇ ನಿಂತಿರತ್ತೆ. ಆ ಕಂಡಕ್ಟರ್ ರೈಯಾ....... ಅಂತ ತನ್ನದೇ ಕೀರಲು ಧ್ವನಿಯಲ್ಲಿ ಕೂಗೋವರೆಗೆ ಟೆಂಪೋ ಮುಂದಕ್ಕೆ ಹೋಗೋದೇ ಇಲ್ಲ. ಇನ್ನು ಜೀಪ್ ಪ್ರಯಾಣವಂತೂ ಕೇಳೋದೇ ಬೇಡ.. ನಮ್ಮೂರಿನ ರಸ್ತೆಗಳಿಗೆ ಅಂತಹ ಜೀಪ್‌ಗಳು ಬೇಕೇ ಬೇಕಾಗಿತ್ತು. ಆ ಜೀಪ್‌ಗಳು ಯಾವ ಗುಡ್ಡ ಬೇಕಾದ್ರೂ ಹತ್ತಿ ಹೋಗ್ತಿತ್ತು.. ಸಣ್ಣಪುಟ್ಟ ತೋಡು, ನದಿ, ಮಣ್ಣು ರಸ್ತೆಯಲ್ಲಿನ ಕೆಸರು.. ಇದ್ಯಾವುದೂ ಆ ಜೀಪ್‌ಗಳಿಗೆ ಸಮಸ್ಯೆಯೇ ಆಗ್ತಿರ್ಲಿಲ್ಲ. ವಿಶೇಷ ಅಂದ್ರೆ ಒಂದು ಜೀಪ್‌ನಲ್ಲಿ ಕಡಿಮೆ ಅಂದ್ರೂ 15ರಿಂದ 20 ಜನ ಇರ್ತಿದ್ರು. ಆ ಡ್ರೈವರ್‌ನ ದೇಹದ ಅರ್ಧ ಭಾಗ ಜೀಪ್‌ನಿಂದಾಚೆ ಇರ್ತಿತ್ತು. ಆತನ ಬ್ಯಾಲೆನ್ಸ್ ಪೂರ್ತಿ ಆ ಜೀಪ್‌ನ ಸ್ಟೆಯರಿಂಗ್ ಮೇಲೆ ಇರ್ತಿತ್ತು.. ಜೀಪ್‌ನ ಎಡಬದಿಯ ಫೂಟ್‌ರೆಸ್ಟ್ ಬಳಿ ಎರಡು ಅಥವಾ ಮೂರು ಜನ ನಿಂತಿರ್ತಿದ್ರು. ಇನ್ನು ಹಿಂಭಾಗದಲ್ಲಿ ಐದು ಜನ ನಿಲ್ಲೋದು ಸಾಮಾನ್ಯವಾಗಿತ್ತು. ಬಸ್ ಇಲ್ಲ ಅಂತ ಗಂಟೆಗಟ್ಟಲೆ ಕಾದು ಕೊನೆಗೆ ಇಂತಹ ಜೀಪೋ, ಟೆಂಪೋದಲ್ಲಿ ಕಷ್ಟಪಟ್ಟು ಕೂತ್ಕೊಂಡು ಹೋಗೋವಾಗ ನಮ್ಮ ಪ್ರೀತಿಯ ಕೆಂಪು ಬಸ್‌ ಬರ್ತಿತ್ತು.. ಬಸ್‌ನ ಮೂತಿ ನೋಡಿದಾಗ ಅದು ನಮ್ಮ ಪರಿಸ್ಥಿತಿ ನೋಡಿ ವ್ಯಂಗ್ಯವಾಗಿ ನಕ್ಕಂಗೆ ಅನಿಸ್ತಿತ್ತು. ನನ್ನನ್ನು ಕಾಯೋಕಾಗ್ದೆ ಅರ್ಜೆಂಟಲ್ಲಿ ಹೋದ್ರಲ್ಲಾ, ಈಗ ಅನುಭವಿಸಿ ಅನ್ನೋ ಥರ ಇರ್ತಿತ್ತು ಆ ಕೆಂಪು ಬಸ್ಸಿನ ಲುಕ್... ಮಳೆಗಾಲದಲ್ಲಿ ಈ ಕೆಎಸ್‌ಆರ್‌ಟಿಸಿ ಬಸ್‌ಗಳು ದೇವರಿಗೆ ಪ್ರೀತಿ.. ಬಸ್‌ನ ಬಹುತೇಕ ಎಲ್ಲಾ ಕಡೆಯಲ್ಲೂ ಸೋರ್ತಿತ್ತು. ಕಿಟಿಕಿ ಪಕ್ಕದ ಸೀಟ್‌ನಲ್ಲಿ ಕೂತು ಕಿಟಕಿ ಹಾಕೊಂಡ್ರೂ ಜೋರು ಮಳೆಗೆ ನೀರು ಒಳಗಡೆ ಬರ್ತಿತ್ತು..
ಆಗೆಲ್ಲ ಮನೆಯಿಂದ ಪೇಟೆ, ಅಥವಾ ಪೇಟೆಯಿಂದ ಮನೆಗೆ ಹೋಗ್ಬೇಕಾದ್ರೆ ನಡ್ಕೊಂಡು ಹೋಗ್ತಿದ್ವಿ. ಆದ್ರೆ ಮಟ ಮಟ ಮಧ್ಯಾಹ್ನ ನಮ್ಮೂರಿನ ಬಿಸಿಲಲ್ಲಿ ನಡೀಬೇಕಾದ್ರೆ ನಿಮಿಷಕ್ಕೊಮ್ಮೆ ಹಿಂದೆ ತಿರುಗಿ ನೋಡ್ತಿದ್ವಿ. ಯಾರಾದ್ರೂ ಪರಿಚಿತರು ಗಾಡಿಯಲ್ಲಿ ಬರ್ತಾ ಇದ್ದಾರಾ ಅಂತ.. ಆಗ ಕೆಲವರೆಲ್ಲ ಬೈಕ್ ಅಥವಾ ಕಾರಿನಲ್ಲಿ ಬಂದ್ರೂ ನೋಡಿಯೂ ನೋಡದಂಗೆ ಹೋಗ್ತಿದ್ರು. ಇನ್ನೂ ಕೆಲವರು ನಿಲ್ಲಿಸಿ ನಮ್ಮನ್ನು ಕರ್ಕೊಂಡು ಹೋಗ್ತಿದ್ರು. ಹಾಗಾಗಿ ಸ್ಕೂಲ್‌ಗೆ ಹೋಗ್ತಿದ್ದಾಗ ಗಾಡಿ ಇರೋವ್ರನ್ನೆಲ್ಲ ಬೇಗ ಪರಿಚಯ ಮಾಡ್ಕೊಂಡು ಬಿಡ್ತಿದ್ವಿ. ನಡ್ಕೊಂಡು ಹೋಗೋದಿದ್ರೂ ಮೈನ್‌ ರೋಡ್‌ಗಿಂತ ಶಾರ್ಟ್‌ ಕಟ್‌ಗಳನ್ನೇ ಹೆಚ್ಚಾಗಿ ಬಳಸ್ತಿದ್ವಿ. ಯಾರದ್ದೋ ತೋಟದ ಮೂಲಕ, ಗದ್ದೆ ಬದಿಯ ಮೂಲಕ ನಮ್ಮದೇ ಲೋಕದಲ್ಲಿ ಏನೋ ಯೋಚನೆ ನಡ್ಕೊಂಡು ಹೋಗೋದು. 
ಸೈಕಲ್ ಓಡ್ಸೋಕೆ ಕಲಿಯೋದು ಹುಡುಗರಿಗೆ ಶಾಲಾ ದಿನದ ದೊಡ್ಡ ಟಾರ್ಗೆಟ್. ಈಗ ಡ್ರೈವಿಂಗ್ ಕಲಿತು ಲೈಸೆನ್ಸ್ ಪಡ್ಕೊಳ್ಳುವಾಗ್ಲೂ ಅಷ್ಟು ಖುಷಿಯಾಗಲ್ಲ. ಆದ್ರೆ ಆಗ ಸೈಕಲ್ ಓಡ್ಸೋಕೆ ಕಲಿತು ಬಿಟ್ರೆ, ಜಗತ್ತನ್ನೇ ಗೆದ್ದು ಬಿಟ್ಟಂಗೆ.. 3 ರೂಪಾಯಿ ಕೊಟ್ರೆ ಒಂದು ಗಂಟೆ ಸೈಕಲ್ ಬಾಡಿಗೆಗೆ ಸಿಗ್ತಿತ್ತು. ಆ ಸೈಕಲ್ ಹೇಗಿತ್ತು ಅಂತ ಹೇಳೋದು ಕಷ್ಟ. ಆದ್ರೆ ಅದನ್ನು ಓಡ್ಸಿದವರಿಗೆ ಆ ಸೈಕಲ್‌ನ ಚಿತ್ರಣ ಕಣ್ಮುಂದೆ ಇರುತ್ತೆ.. ಪುಸ್ತಕ ತಗೊಳ್ಳೋಕೋ ಅಥವಾ ಇನ್ಯಾವುದಕ್ಕೋ ಅಪ್ಪ ಕೊಡ್ತಿದ್ದ ಹಣದಲ್ಲಿ 25, 50 ಪೈಸೆ ಉಳಿಸ್ತಾ 3 ರೂಪಾಯಿ ಆಗ್ತಿದ್ದಂಗೆ ಸೈಕಲ್ ಬಾಡಿಗೆಗೆ ತಗೊಂಡು ರೌಂಡ್ ಹೊಡಿಯೋಕೆ ಹೋಗ್ತಿದ್ವಿ. ಆ ಸೈಕಲ್‌ನಿಂದ ಅದೆಷ್ಟು ಸಲ ಬಿದ್ದಿದ್ದೀವಿ ಅನ್ನೋದಿಕ್ಕೆ ಲೆಕ್ಕನೇ ಇರಲ್ಲ.. ಆಗ ಬಹುತೇಕ ಎಲ್ಲರ ಮೊಣಕೈ ಮತ್ತು ಮೊಣಕಾಲಿನ ಮೇಲೆ ಚರ್ಮನೇ ಇರ್ತಿರ್ಲಿಲ್ಲ.. Funny but its true.. ಸಾಮಾನ್ಯವಾಗಿ ಇಬ್ರೂ ಅಥವಾ ಮೂವರು ಸೈಕಲ್ ಬಾಡಿಗೆಗೆ ಪಡ್ಕೊಂಡು ರೌಂಡ್ ಹೊಡಿಯೋಕೆ ಹೋಗ್ತಿದ್ವಿ. ತೀರಾ ಹಣ ಇಲ್ಲದೆ ಇದ್ದಾಗ ನಮ್ಮ ಮನೆಯದ್ದೋ ಅಥವಾ ಪಕ್ಕದ ತೋಟದ್ದೋ ಗೇರುಬೀಜ ಸಂಗ್ರಹಿಸಿ ಅದನ್ನು ಮಾರಾಟ ಮಾಡಿ, ಆ ಹಣದಲ್ಲಿ ಸೈಕಲ್ ಬಾಡಿಗೆಗೆ ತಗೊಳ್ಳೋಕೆ ಹೋಗಿದ್ದೂ ಉಂಟು.. ನಾವು ಆಗ ಸೈಕಲ್ ಮೇಲೆ ಕೂತು ಹೋಗ್ಬೇಕಾದ್ರೆ ಆ ಫೀಲ್, ಈಗಿನ ಯಾವ ಬುಲೆಟ್‌ ರೈಡ್‌ಗೂ ಕಡಿಮೆ ಇರ್ತಿರ್ಲಿಲ್ಲ. 
ಸಣ್ಣವರಿದ್ದಾಗ ಹಾಲಿನ ಹುಡಿ ತಿನ್ನೋದು ನಂಗಂತೂ ತುಂಬಾನೇ ಇಷ್ಟವಾಗಿತ್ತು. ಇದು ನಂಗೆ ಮಾತ್ರ ಅಲ್ಲ ಅನ್ಸತ್ತೆ.. ಎಲ್ರಿಗೂ ಆಗ್ತಿತ್ತೇನೋ.. ಮನೆಯಲ್ಲಿ ಅಮ್ಮ ಹಾಲಿನ ಹುಡಿಯ ಪ್ಯಾಕೆಟನ್ನು ಯಾವುದೋ ಡಬ್ಬಿಯಲ್ಲಿ ಇಡ್ತಿದ್ರು. ನೆಂಟ್ರು ಬಂದ್ರೆ ಮಾತ್ರ ಟೀ ಅಥವಾ ಕಾಫಿ ಮಾಡೋಕೆ ಅಂತ ನಮ್ಮ ಕಣ್ಣಿಗೆ ಕಾಣಿಸ್ಬಾರ್ದು ಅಂತ ಅದನ್ನು ಅಡಗಿಸಿ ಇಡ್ತಿದ್ರು. ಮನೆಯಲ್ಲಿ ಯಾರೂ ಇಲ್ಲದೆ ಇದ್ದಾಗ ನಮ್ಮ ಇನ್ವೆಸ್ಟಿಗೇಷನ್ ಸ್ಟಾರ್ಟ್ ಆಗ್ಗಿತ್ತು. ಆಪರೇಷನ್ ಮಿಲ್ಕ್ ಪೌಡರ್.. ಜಾಸ್ತಿ ತಿಂದ್ರೆ ಮತ್ತೆ ಅಮ್ಮ ಓಪನ್ ಮಾಡಿ ನೋಡಿದಾಗ ಗೊತ್ತಾಗತ್ತೆ ಅಂತ ಒಂದು ಸ್ಪೂನ್ ಮಾತ್ರ ಬಾಯಿಗೆ ಹಾಕ್ತಿದ್ವಿ. ಆದ್ರೆ ಒಂದು ಸ್ಪೂನ್ ತಿನ್ತಾ ಇದ್ದಂಗೆ ಇನ್ನೊಂದು ಸ್ಪೂನ್ ತಿನ್ನೋಣ ಅಂತ ಮನಸಾಗ್ತಿತ್ತು. ಹೀಗೆ ನಾಲ್ಕೈದು ಬಾರಿ ಆದಾಗ ಹಾಲಿನ ಹುಡಿ ಬಹುತೇಕ ಖಾಲಿ ಆಗ್ತಿತ್ತು. ಯಾವತ್ತಾದ್ರೂ ನೆಂಟ್ರು ಬಂದಾಗ ಟೀ ಮಾಡೋಣ ಅಂತ ಅಮ್ಮ ಅಡಗಿಸಿ ಇಟ್ಟಿದ್ದ ಹಾಲಿನ ಹುಡಿ ತೆಗೆದು ನೋಡಿದ್ರೆ ಅದ್ರಲ್ಲೇನೂ ಇರ್ತಿಲ್ಲಿಲ್ಲ.. ಆಮೇಲೇ ಬೈಗುಳ ಇದ್ದಿದ್ದೇ.. ಆಗ ಯಾವುದಾದ್ರೂ ಮಂಚದ ಮೂಲೆಯಲ್ಲಿ ಅಡಗಿ ಕೂತ್ಕೋತಿದ್ವಿ. 
ನೆಲ್ಲಿಕಾಯಿ ಮರ ಹುಡುಕ್ಕೊಂಡು ಹೋಗಿ, ನೆಲ್ಲಿಕಾಯಿ ಕಿತ್ತು ತಿಂದು ಆಮೇಲೆ ನೀರು ಕುಡಿಯುವಾಗ ಅದೆಷ್ಟು ಸಿಹಿ ಇರ್ತಿತ್ತು ಅಲ್ವಾ.. ಬೆಳ್ಳಂಬೆಳಗ್ಗೆ ಚಳಿಯನ್ನೂ ಲೆಕ್ಕಿಸದೆ ಕಾಡು ಮಾವಿನ ಮರದತ್ತ ಓಡಿ ಹೋಗಿ ಮಾವಿನ ಹಣ್ಣು ಹೆಕ್ಕೋದು.. ಆಮೇಲೆ ಅದ್ರ ಸೊನೆಯನ್ನು ಅದೇ ಮರಕ್ಕೆ ಮೆತ್ತಿಸಿ ಆ ಮಾವಿನ ಹಣ್ಣಿನ ರಸವನ್ನು ಹೀರೋದ್ರಲ್ಲಿ ತುಂಬಾನೇ ಟೇಸ್ಟ್ ಇತ್ತು. ಅಮವಾಸ್ಯೆಗೊಮ್ಮೆ ಹುಣ್ಣಿಮೆಗೊಮ್ಮೆ ಬೆಳೆಯುವ ಚೆರಿ ಹಣ್ಣು ಕೆಂಪು ಬಣ್ಣಕ್ಕೆ ತಿರುಗ್ತಿದ್ದಂಗೆ ಬಾಯೊಳಗೆ ಹಾಕೊಳ್ತಿದ್ವಿ. ಹಲಸಿನ ಹಣ್ಣು ಮರದಿಂದ ಕೆಳಗೆ ಬಿದ್ರೆ ಅಲ್ಲೇ ಬುಡದಲ್ಲಿ ಕೂತು ತಿನ್ತಾ ಇದ್ವಿ. ಐಸ್ ಕ್ಯಾಂಡಿ ಮಾರೋಕೆ ಬರುವವರ ಸೈಕಲ್ ಗಂಟೆ ಸದ್ದು ಕೇಳಿಸಿದ್ರೆ ಸಾಕು.. ಮನೆಯಲ್ಲಿರೋ ಚಿಲ್ಲರೆಯನ್ನೆಲ್ಲ ಜಾಲಾಡ್ತಿದ್ವಿ. 25 ಪೈಸೆಗೆ ಕ್ಯಾಂಡಿ, 50 ಪೈಸೆಗೆ ಬೆಲ್ಲ ಕ್ಯಾಂಡಿ.. ವಿವಿಧ ಕಲರ್‌ಗಳಲ್ಲಿ ಬರ್ತಿದ್ದ ಲಾಲಿಯನ್ನು ಚಪ್ಪರಿಸಿದ್ದೇ ಚಪ್ಪರಿಸಿದ್ದು.. ಅದು ಖಾಲಿ ಆದ್ಮೇಲೂ ಪ್ಲಾಸ್ಟಿಕ್ ಕವರ್ ನೆಕ್ಕೋದು ಇದ್ದಿದ್ದೇ.. 
ಸ್ಕೂಲ್‌ನಲ್ಲಿ ಸಾಮಾನ್ಯವಾಗಿ ಏನಾದ್ರೂ ಅಸೈನ್‌ಮೆಂಟ್ ಬರ್ಕೊಂಡು ಬರೋಕೆ ಹೇಳ್ತಿದ್ರು. ಆದ್ರೆ ನಾವು ಹುಡುಗರು ಅದನ್ನೆಲ್ಲ ಬರ್ಕೊಂಡು ಬರ್ತಾ ಇದ್ದಿದ್ದು ಕಡಿಮೆ. ಕೆಲವೊಮ್ಮೆ ಕ್ಲಾಸ್‌ಗೆ ಬರುವ ಟೀಚರ್ ಸಹ ಅದನ್ನು ಮರೆತಿರ್ತಿದ್ರು. ಆದ್ರೆ ಈ ಗಾಂಧಿ ಪೀಸ್‌ಗಳು ಇದ್ದಾವಲ್ಲಾ.. especially ಹೆಣ್ಮಕ್ಕಳು.. ಸಾರ್.. ನೀವು ಅಸೈನ್‌ಮೆಂಟ್ ಬರ್ಕೊಂಡು ಬರೋಕೆ ಹೇಳಿದ್ರಿ ಅಂತ ರಾಗ ಎಳೀತಿದ್ರು. ಆಗ್ಲೇ ನೋಡಿ ನಮ್ಮ ಟೀಚರು ಆ ಹೆಣ್ಮಕ್ಕಳಿಗೆ ಶಹಬ್ಬಾಸ್‌ಗಿರಿ ನೀಡ್ತಾ ಅಸೈನ್‌ಮೆಂಟ್ ಬರೆಯದೆ ಬಂದವರೆಲ್ಲ ಎದ್ದು ನಿಂತ್ಕೊಳ್ಳಿ ಅಂತ ಹೇಳ್ತಿದ್ರು. ಕೊನೆಗೆ ನೋಡಿದ್ರೆ ಕೆಲವೇ ಕೆಲವರನ್ನು ಬಿಟ್ಟು ಉಳಿದವರೆಲ್ಲ ಎದ್ದು ನಿಂತ್ಕೋತಿದ್ರು. ನಾವಂತೂ ಎದ್ದು ನಿಲ್ಲೋದ್ರಲ್ಲಿ ಮಿಸ್ಸೇ ಇಲ್ಲ.. 
ಐದು ಅಥವಾ ಆರನೆಯ ಕ್ಲಾಸ್‌ನಲ್ಲಿ ಇರ್ಬೇಕು.. ನಂಗೆ ಗಣಿತದಲ್ಲಿ ಅರ್ಧ ಮಾರ್ಕ್ಸ್ ಸಿಕ್ಕಿತ್ತು. 25ರಲ್ಲಿ ಅರ್ಧ ಮಾರ್ಕ್ಸ್.. ಆ ದಿನ ನಾನು ಬೈಸ್ಕೊಂಡಿದ್ದನ್ನು ಮರೆಯೋಕಾಗಲ್ಲ. ಕೊನೆಗೆ ಮನೆಯಿಂದ ಯಾರನ್ನಾದ್ರೂ ಕರ್ಕೊಂಡು ಬರೋಕೆ ಹೇಳಿದ್ರು. ದುರಂತ ಅಂದ್ರೆ ಸಂಜೆ ಉತ್ತರ ಪತ್ರಿಕೆಯೊಂದಿಗೆ ಮನೆಗೆ ಹೋಗಿದ್ದೆ. ಆದ್ರೆ ಆ ಉತ್ತರ ಪತ್ರಿಕೆ ಎಲ್ಲೋ ಕಳ್ದೋಗಿತ್ತು. ಮರುದಿನ ಅಮ್ಮನನ್ನು ಕರ್ಕೊಂಡು ಸ್ಕೂಲ್‌ಗೆ ಹೋಗಿದ್ದೆ. ನಮ್ಮ ಗಣಿತದ ಮೇಷ್ಟ್ರು ಅಮ್ಮನ ಮುಂದೆ ನಂಗೆ ಉಗ್ದು ಉಪ್ಪಿನಕಾಯಿ ಹಾಕಿದ್ರು. ಮನೆಗೆ ಹೋದ್ಮೇಲೆ ಅಮ್ಮ ನಡೆದಿದ್ದನ್ನೆಲ್ಲ ಅಪ್ಪನ ಬಳಿ ಹೇಳಿದ್ರು. ಆಗ ಅಪ್ಪನ ಕಡೆಯಿಂದನೂ ಮಂಗಳಾರತಿ ಆಗಿತ್ತು. ಜೊತೆಗೆ ಬೆತ್ತದ ರುಚಿಯೂ..
ಆ ಟೈಮ್‌ನಲ್ಲಿ ಯಾರದ್ದಾದ್ರೂ ಮನೆಯಲ್ಲಿ ಬೋರೆವೆಲ್‌ ಕೊರೆಯುತ್ತಾ ಇದ್ರೆ ನಾವು ಬೆಳಿಗ್ಗೆಯಿಂದ ಸಂಜೆವರೆಗೂ ಅಲ್ಲೇ ಇರ್ತಿದ್ವಿ. ಆಗೆಲ್ಲ 300-400 ಅಡಿಗೆಲ್ಲ ನೀರು ಸಿಗ್ತಿತ್ತು. ಬೋರೆವೆಲ್ ಕೊರೆದು ನೀರು ಸಿಗ್ತಿದ್ದಂಗೆ ಪೈಪ್ ಮೂಲಕ ನೀರು ಮೇಲಕ್ಕೆ ಹಾರೋದನ್ನು ನೋಡೋದೇ ಕಣ್ಣಿಗೆ ಹಬ್ಬವಾಗಿತ್ತು. ಇನ್ನು ಎಲ್ಲಾದ್ರೂ ಜೆಸಿಬಿ ಕೆಲಸ ಮಾಡ್ತಿದ್ರೆ ಅದನ್ನು ನೋಡ್ತಾ ನಿಲ್ಲೋದೇ ಕೆಲಸ. ಜೆಸಿಬಿ ಮಣ್ಣು ತೆಗೆಯೋದನ್ನು ಎಷ್ಟು ನೋಡಿದ್ರೂ ಸಾಕಾಗ್ತಾ ಇರ್ಲಿಲ್ಲ. ಮನೆಗೆ ಬಂದ್ಮೇಲೆ ಬಲಗೈಯಲ್ಲಿ ಜೆಸಿಬಿ ರೀತಿಯಲ್ಲೇ ಮಣ್ಣು ತೆಗಿಯೋಕೆ ನೋಡ್ತಿದ್ವಿ. ಅದೂ ಒಂದು ರೀತಿಯ ಆಟ. ಲಕ್ಷದೀಪೋತ್ಸವ ಮತ್ತಿತರ ಜಾತ್ರೆ ವೇಳೆ ಪ್ಲಾಸ್ಟಿಕ್‌ನ ಆಟಿಕೆ ಜೆಸಿಬಿಯನ್ನು ಖರೀದಿ ಮಾಡುವಂತೆ ಅಪ್ಪನಿಗೆ ದುಂಬಾಲು ಬೀಳೋದು, ಅಪ್ಪ ಬೈಯೋದು.. ಜಾತ್ರೆಗೆ ಗೆಳೆಯರ ಜೊತೆಗೆ ಸುಮ್ಮನೆ ಸುತ್ತಾಡೋದು.. ಸಂಜೆಯಿಂದ ಮಧ್ಯರಾತ್ರಿ ವರೆಗೆ. ಜೇಬಲ್ಲಿ ಒಂದು ರೂಪಾಯಿಯೂ ಇರ್ತಿರ್ಲಿಲ್ಲ. ಇರೋ ಬರೋ ಸ್ಟಾಲ್‌ಗಳ ಬ್ರೌಷರ್‌ಗಳನ್ನು ತಗೊಂಡು ಜೇಬಲ್ಲಿ ಇಟ್ಕೋತಿದ್ವಿ. ಮಧ್ಯರಾತ್ರಿ ವರೆಗೆ ಸುತ್ತಾಡಿ ಕಾಲು ಸೋತ ಮೇಲೆ ಮನೆ ಕಡೆ ಹೆಜ್ಜೆ ಹಾಕೋದು. ಐದು ದಿನ ಜಾತ್ರೆ ಇದ್ರೆ, ಐದೂ ದಿನ ಸುತ್ತಾಡ್ತಿದ್ವಿ. ಈ ಐದು ದಿನದಲ್ಲಿ ಯಾವತ್ತೋ ಒಂದು ದಿನ ಅಪ್ಪನ ಬಳಿ ಕಾಡಿ ಬೇಡಿ ತಗೊಂಡ 10-20 ರೂಪಾಯಿಯಲ್ಲಿ ಐಸ್‌ಕ್ರೀಮ್ ಅಥವಾ ಗೋಬಿ ಮಂಚೂರಿ ತಿಂದ್ರೆ ಅದೇ ದೊಡ್ಡ ವಿಷ್ಯ. 
ಅಂದ ಹಾಗೆ ಇವೆಲ್ಲ ಬಹುತೇಕ ಪ್ರಾಥಮಿಕ ಶಾಲೆಯ ದಿನದ ನೆನಪುಗಳು..

ಬಾಲ್ಯದ ನೆನಪುಗಳು..

ವೃತ್ತಿ ಜೀವನ ಆರಂಭವಾಗಿ 10 ವರ್ಷಗಳು ಆಗ್ತಾ ಬಂತು.. ಅಪರೂಪಕ್ಕೊಮ್ಮೆ ಬಿಡುವು ಸಿಕ್ಕಾಗ ಹಳೆಯ ದಿನಗಳೆಲ್ಲ ನೆನಪಾಗುತ್ತೆ.. Especially ಶಾಲೆಗೆ ಹೋಗ್ತಿದ್ದ ದಿನಗಳು.. ಆ ದಿನಗಳು ಇನ್ನೆಂದಿಗೂ ಮರಳಿ ಬರಲ್ಲ.. ಈಗಿನ ಮಕ್ಕಳಿಗೆ ಆ ದಿನಗಳು ಸಿಗೋದೂ ಇಲ್ಲ.. ಆದ್ರೆ ಈಗ ಆ ದಿನಗಳನ್ನು ನೆನೆಸಿಕೊಳ್ಳೋದೆ ಒಂಥರಾ ಖುಷಿ..
ಮನೆಯಲ್ಲಿ ನನ್ನ ಕಾಟ ತಡೆಯೋಕಾಗ್ದೆ ಒಂದು ವರ್ಷ ಮೊದ್ಲೇ ಅಂಗನವಾಡಿಗೆ ಸೇರಿಸಿದ್ರು. ಅಂಗನವಾಡಿ ಮನೆಯಿಂದ ತುಂಬಾ ಹತ್ತಿರ ಇತ್ತು. ಆಗ ನಮ್ಮ ಅಂಗನವಾಡಿಯಲ್ಲಿ ಜಾನಕಿ ಟೀಚರ್ ಪಾಠ ಮಾಡ್ತಿದ್ರು. ಚಡ್ಡಿ ಹಾಕೊಂಡು ಅಂಗನವಾಡಿಗೆ ಹೋಗ್ತಿದ್ದ ದಿನಗಳು.. ಹೆಚ್ಚಾಗಿ ಅಮ್ಮನೇ ನನ್ನನ್ನು ಅಂಗನವಾಡಿಗೆ ಕರ್ಕೊಂಡು ಹೋಗ್ತಾ ಇದ್ದಿದ್ದು. ಒಮ್ಮೊಮ್ಮೆ ಅಪ್ಪ.. ಅಂಗನವಾಡಿ ಸಮೀಪವೇ ಇದ್ದ ಥಾಮಸ್ ಅವರ ಮಿಠಾಯಿ ಅಂಗಡಿ. 5 ಪೈಸೆಗೆ ಸಿಗ್ತಾ ಇದ್ದ ಮಿಠಾಯಿ ಮುಂದೆ ಈಗಿನ ಯಾವ ಚಾಕ್ಲೇಟುಗಳೂ ಸಾಠಿಯಾಗಲ್ಲ. ಆಗ ಅಂಗನವಾಡಿಯಲ್ಲಿ ಮಧ್ಯಾಹ್ನ ಉಂಡೆ ಕೊಡ್ತಿದ್ರು. ಅದ್ರ ಹೆಸ್ರು ಮರ್ತೋಗಿದೆ.. ಬಟ್ ಅದ್ರ ರುಚಿ ಮಾತ್ರ ಇನ್ನೂ ಬಾಯಲ್ಲಿ ನೀರೂರಿಸುತ್ತೆ. ಪ್ಯಾಕೆಟ್ ರೂಪದಲ್ಲಿ ಬರ್ತಿದ್ದ ಹುಡಿಯನ್ನು ಅಂಗನವಾಡಿಯ ಆಯಾ, ದೊಡ್ಡದೊಂದು ಪಾತ್ರೆಯಲ್ಲಿ ಹಾಕಿ, ಅದಕ್ಕೊಂಚೂರು ನೀರು ಮಿಕ್ಸ್ ಮಾಡಿ ಉಂಡೆ ಮಾಡ್ತಿದ್ರು. ಒಬ್ಬರಿಗೆ ಸಾಮಾನ್ಯವಾಗಿ ಎರಡು ಉಂಡೆ ಸಿಗ್ತಿತ್ತು. ಕೆಲವೊಮ್ಮೆ ಅಂಗನವಾಡಿಯ ಸ್ಟೋರ್ ರೂಮ್‌ನಲ್ಲಿ ಪ್ಯಾಕೆಟ್‌ನಲ್ಲಿ ಮಿಕ್ಕಿದ ಹುಡಿಯನ್ನು ನಾವು ಅಂಗೈಗೆ ಹಾಕೊಂಡು ತಿನ್ತಿದ್ವಿ. ಆಗ ಆ ಹುಡಿ ಕೆನ್ನೆಯ ತುಂಬೆಲ್ಲಾ ಇರ್ತಿತ್ತು...
ಅಂಗನವಾಡಿ ಬಳಿಕ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದ ಮುಂಡ್ರುಪ್ಪಾಡಿ ಶಾಲೆಯಲ್ಲಿ ನನ್ನ ಒಂದನೇ ತರಗತಿ ವ್ಯಾಸಂಗ. ನಾಲ್ಕು ಕಿಲೋಮೀಟರ್ ನಡ್ಕೊಂಡು ಹೋಗೋದು ಆಗ ತುಂಬಾ ಕಷ್ಟ ಆಗ್ತಿತ್ತು. ಮಳೆಗಾಲದಲ್ಲಂತೂ ಕೈಯಲ್ಲೊಂದು ಕೊಡೆ ಹಿಡ್ಕೊಂಡು ಬ್ಯಾಗ್ ಒದ್ದೆಯಾಗದಂತೆ ಹೋಗೋದು ಪ್ರಯಾಸದ ಕೆಲಸ. ಅದು ಕಾಲು ಬೆಂಡಾಗಿರುವ ಉದ್ದದ ಕೊಡೆ. ಅಲ್ಲಲ್ಲಿ ಸೋರ್ತಿತ್ತು. ಹಾಗಾಗಿ ಮನೆಯಿಂದ ಹೊರಡುವಾಗ್ಲೇ ಅಮ್ಮ ಪ್ಲಾಸ್ಟಿಕ್ ಕವರೊಂದನ್ನು ತಲೆ ಮೇಲೆ ಕಟ್ತಿದ್ರು. ಕೊಡೆ ಸೋರಿದ್ರೂ, ತಲೆ ಮೇಲೆ ನೀರು ಬೀಳ್ಬಾರ್ದು ಅಂತ.. ಇನ್ನು ಬೆನ್ನಿಗೆ ಬಟ್ಟೆಯ ಬ್ಯಾಗ್. ಅದರೊಳಗೊಂದು ಉದ್ದದ ಬುತ್ತಿ.. ಅದಕ್ಕೊಂದು ಅರ್ಧ ವರ್ತುಲಾಕಾರದ ಪುಟ್ಟ ಹಿಡಿ.. ಸಾಮಾನ್ಯವಾಗಿ ಆ ಬುತ್ತಿಯಲ್ಲಿ ಅನ್ನ ಅಥವಾ ಗಂಜಿ ಇರ್ತಿತ್ತು. ಶಾಲೆಗೆ ಹೋಗ್ತಾ ಪಾಪಚ್ಚಣ್ಣನ ಅಂಗಡಿಯಿಂದ 25 ಪೈಸೆಯ ಉಪ್ಪಿನಕಾಯಿ ಪ್ಯಾಕೆಟ್ ತಗೊಂಡು ಹೋಗ್ತಿದ್ದೆ. ಇನ್ನು ಆ ಬ್ಯಾಗ್‌ ಒಳಗೆ ಬೆರಳೆಣಿಕೆಯ ಪುಸ್ತಕಗಳು.. ಮರದ ಪಟ್ಟಿಯಿಂದ ಕೂಡಿದ ಒಂದು ಸ್ಲೇಟ್.. ಸ್ಲೇಟ್ ಒರೆಸಲು ಹಿತ್ತಲಲ್ಲಿ ಬೆಳೆಯುವ ಅದ್ಯಾವುದೋ ಗಿಡದ ಕಡ್ಡಿ.. ಪುಟ್ಟ ಬಿಳಿ ಮತ್ತು ಕಂದು ಬಣ್ಣದ ಪುಟ್ಟ ಚಾಕ್‌ನಲ್ಲಿ ಒಮ್ಮೆ ಬರೆದ ಮೇಲೆ, ಆ ಕಡ್ಡಿಯಿಂದ ಅದನ್ನು ಒರೆಸ್ತಿದ್ವಿ. ಆಗ ಕೆಲವರು ಪ್ಲಾಸ್ಟಿಕ್ ಸ್ಲೇಟ್ ತರ್ತಿದ್ರು. ನಮ್ಮ ಪಾಲಿಗೆ ಅವರೆಲ್ಲ ಶ್ರೀಮಂತರ ಮನೆಯ ಮಕ್ಕಳು.. ಮುಂಡ್ರುಪ್ಪಾಡಿಯ ಆ ಶಾಲೆಗೆ ಹೋಗುವಾಗ ಒಂದು ನೀರಿನ ಹಳ್ಳ ಬರ್ತಿತ್ತು. ನಾವದನ್ನು ತೋಡು ಅಂತ ಕರೀತಿದ್ವಿ. ಈ ತೋಡು ದಾಟಲು ಅಡಿಕೆ ಮರದ ಸೇತುವೆ.. ಅಡಿಕೆ ಮರದ ಸೇತುವೆ ಅಂತ ಗಾಬರಿಯಾಗ್ಬೇಡಿ.. ಅಡಿಕೆ ಮರವನ್ನು ಎರಡು ಅಥವಾ ನಾಲ್ಕು ಭಾಗ ಮಾಡ್ತಾರೆ. ಬಳಿಕ ಅದರ ಹೊರಭಾಗ ಮೇಲ್ಭಾಗದಲ್ಲಿ ಬರುವಂತೆ ಇಟ್ಟು ನಾಲ್ಕೈದು ಕಡೆ ಹಗ್ಗದಿಂದ ಕಟ್ತಾರೆ. ಇದು ಸಾಮಾನ್ಯವಾಗಿ 30 ರಿಂದ 40 ಅಡಿ ಉದ್ದ ಇರುತ್ತೆ. ಇದನ್ನೇ ತೋಡಿನ ಎರಡೂ ಕಡೆಯ ದಡಕ್ಕೆ ಮುಟ್ಟುವಂತೆ ಹಾಕಿರ್ತಾರೆ. ಈ ಎರಡೂ ಬದಿಯಲ್ಲಿ ಒಂದು ಮರದ ಕಂಬ ನೆಟ್ಟು, ಈ ಸೇತುವೆಗೆ ಹೊಂದಿಕೊಂಡಂತೆ ಉದ್ದಕ್ಕೆ ಹಗ್ಗ ಕಟ್ತಾರೆ. ಸೇತುವೆ ಮೇಲೆ ನಡೆದುಕೊಂಡು ಹೋಗುವವರು ಕೆಳಗೆ ಬೀಳದಂತೆ ಸಪೋರ್ಟೀವ್ ಆಗಿರ್ಲಿ ಅಂತ.. ಕೈಯಲ್ಲೊಂದು ಕೊಡೆ ಹಿಡ್ಕೊಂಡು, ಬೆನ್ನ ಮೇಲೆ ಬ್ಯಾಗ್ ಹಾಕೊಂಡು ಜೋರು ಮಳೆಯಲ್ಲಿ ಆ ಸೇತುವೆ ಮೇಲೆ ನಡೆಯೋಕೆ ಭಯ ಆಗ್ತಿತ್ತು. ಯಾಕಂದ್ರೆ ಅಡಿಕೆ ಮರದ ಸೇತುವೆ ಮೇಲೆ ನೀರು ಬಿದ್ದಾಗ ಅದು ಜಾರಲು ಶುರುವಾಗ್ತಿತ್ತು. ಆಗೆಲ್ಲ ಚಪ್ಪಲಿ ಹಾಕ್ತಾನೇ ಇರ್ಲಿಲ್ಲ. ಬರಿಗಾಲಲ್ಲೇ ಓಡಾಡ್ತ ಇದ್ದಿದ್ರಿಂದ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ವಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಆ ಸೇತುವೆ ಸಮೀಪದ ಮನೆಯ ಹಿರಿಯರು ಯಾರಾದ್ರೂ ಶಾಲೆಗೆ ಹೋಗುವ ಮಕ್ಕಳನ್ನು ಸೇತುವೆ ದಾಟಿಸೋಕೆ ಅಂತನೇ ಅಲ್ಲಿ ನಿಂತಿರ್ತಿದ್ರು.. ಮಳೆ ಅಂದ್ರೆ ಸುಮ್ಮನೆ ಒಂದರ್ಧ ಗಂಟೆ ಬಂದು ಹೋಗುವಂತದ್ದಾಗಿರ್ಲಿಲ್ಲ.. ರಾತ್ರಿ ವೇಳೆ ಶುರುವಾಗುವ ಮಳೆ ಸತತವಾಗಿ ಎರಡು ಮೂರು ದಿನ ಸುರಿಯುತ್ತಿತ್ತು. ಕೆಲವೊಮ್ಮೆ ಆ ಮಳೆಗೆ ನಮ್ಮ ಅಡಿಕೆ ಮರದ ಸೇತುವೆ ಸಹ ಮುಳುಗುತ್ತಿದ್ದರಿಂದ ಎಷ್ಟೋ ಬಾರಿ ಶಾಲೆಗೆ ಹೊರಟವರು ವಾಪಾಸ್ ಮನೆಗೆ ಹೋಗಿದ್ದೂ ಉಂಟು. ಆ ದಿನ ನನ್ನ ಖುಷಿಗೆ ಪಾರವೇ ಇರ್ತಿರ್ಲಿಲ್ಲ..
ಒಂದನೇ ತರಗತಿ ಮುಗಿಯುತ್ತಿದ್ದಂಗೆ ನನ್ನ ಶಾಲೆ ಬದಲಾಯ್ತು. ಧರ್ಮಸ್ಥಳದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಂಡೆ. ಮನೆಯಿಂದ ಶಾಲೆಗೆ ಸುಮಾರು 2 ಕಿಲೋ ಮೀಟರ್. ಆಗ್ಲೂ ನಡ್ಕೊಂಡೇ ಹೋಗಿ ಬರ್ತಾ ಇದ್ದಿದ್ದು. ಆದ್ರೆ ಜೊತೆಗೆ ಗೆಳೆಯರು ತುಂಬಾ ಮಂದಿ ಇದ್ರು. ಅದರಲ್ಲಿ ಚೇತನ್ ಸಹ ಒಬ್ಬ.. ಅಂಗನವಾಡಿಯಿಂದ ಶುರುವಾದ ನಮ್ಮ ಸ್ನೇಹ ಇನ್ನೂ ಹಾಗೇ ಇದೆ.. 29 ವರ್ಷ ಕಳೆದರೂ.. ನಮ್ಮ ಜೊತೆಗೆ ಇನ್ನೂ ಹಲವಾರು ಮಂದಿ ಗೆಳೆಯರಿದ್ರು.. ಬಹುತೇಕ ನಾವೆಲ್ಲರೂ ನೆರೆಹೊರೆಯವರೇ.. ಹಾಗಾಗಿ ಶಾಲೆಗೆ ಹೋಗಿ ಬರೋದು ನಮ್ಮ ಪಾಲಿನ ಜಾಲಿ ಟ್ರಿಪ್ ಅಂತನೇ ಹೇಳ್ಬೋದು. ಶಾಲೆಗೆ ಹೋಗುವ ದಾರಿಯಲ್ಲಿ ಯಾವ ಮಾವಿನ ಮರವನ್ನೂ ಬಿಡ್ತಿರ್ಲಿಲ್ಲ.. ಸಣ್ಣ ಮಾವಿನಕಾಯಿ ಕಂಡ್ರೂ ಸಾಕು.. ನಮ್ಮ ಚೋಟಾ ಗ್ಯಾಂಗ್ ಕೈಯಲ್ಲಿ ಕಲ್ಲುಗಳನ್ನು ಹಿಡ್ಕೊಂಡು ರೆಡಿಯಾಗಿರ್ತಿದ್ವಿ. ಮರದ ಮೇಲಿನ ಮಾವಿನ ಕಾಯಿಗೆ ಕಲ್ಲು ಹೊಡೆಯೋಕೆ.. ಕೊನೆಗೆ ಯಾರೇ ಮಾವಿನಕಾಯಿ ಬೀಳಿಸಿದ್ರೂ, ಎಲ್ರೂ ಸೇರ್ಕೊಂಡು ಅದನ್ನು ಹಂಚ್ಕೊಂಡು ತಿನ್ತಿದ್ವಿ.
ಶಾಲೆಗೆ ಹೋಗ್ತಿದ್ದಾಗ ನಮ್ಮ ಮನೆಯ ಸಮೀಪವೇ ಸಣ್ಣದೊಂದು ನೀರಿನ ತೊರೆ ಹರಿಯುತ್ತಿತ್ತು. ಈಗ್ಲೂ ಇದೆ.. ಆದ್ರೆ ನೀರು ಕಡಿಮೆ. ಈ ತೊರೆ ಸಮೀಪದಲ್ಲೇ ಇರುವ ಮನೆಯವರು ಯಾವುದೋ ಕೆಲಸಕ್ಕಾಗಿ ಕೆಂಪು ಕಲ್ಲು ತಂದಿಟ್ಟಿದ್ರು. ಒಂದು ದಿನ ಸಂಜೆ ನಾನೂ ನನ್ನ ಗೆಳೆಯ ಇಬ್ರೂ ಸೇರ್ಕೊಂಡು ಆ ಕಲ್ಲನ್ನೆಲ್ಲ ತೊರೆಗೆ ಅಡ್ಡಲಾಗಿ ಜೋಡಿಸಿ ಅಣೆಕಟ್ಟು ರೀತಿಯಲ್ಲಿ ಕಟ್ಟಿದ್ವಿ.. ಮರುದಿನ ಬೆಳಿಗ್ಗೆ ನೋಡಿದ್ರೆ ರಸ್ತೆ ತುಂಬೆಲ್ಲ ನೀರು.. ನಾವು ಕಟ್ಟಿದ ಅಣೆಕಟ್ಟನಿಂದಾಗಿ ನೀರು ನಿಂತು ರಸ್ತೆವರೆಗೂ ನೀರು ನಿಂತು, ರಸ್ತೆಯ ಇನ್ನೊಂದು ಬದಿಯಲ್ಲಿರುವ ತೋಟಕ್ಕೂ ನೀರು ನುಗ್ಗಿತ್ತು. ಬೆಳಿಗ್ಗೆ ನಾವು ಶಾಲೆಗೆ ಹೊರಟು ರಸ್ತೆಯಲ್ಲಿ ನಡ್ಕೊಂಡು ಬರ್ಬೇಕಾದ್ರೆ, ನಾವು ಕಟ್ಟಿದ್ದ ಅಣೆಕಟ್ಟಿನ ಪಕ್ಕದ ರಸ್ತೆಯಲ್ಲಿ ವಾಹನಗಳು ಓಡಾಡೋಕೆ ಆಗದೆ ನಿಂತಿತ್ತು. ನಮಗೆ ಮನಸ್ಸಲ್ಲೇ ನಗು.. ಆದ್ರೆ ಏನೂ ಗೊತ್ತಿಲ್ಲದ ರೀತಿಯಲ್ಲಿ ನಿಂತಿದ್ವಿ. ಇವಾಗ ಅದೆಲ್ಲ ನೆನೆಸ್ಕೊಂಡಾಗ ನಗು ಬರುತ್ತೆ..
ನಾವೆಲ್ಲ ಶಾಲೆಗೆ ಹೋಗ್ತಿದ್ದಾಗ ರಸ್ತೆಯಲ್ಲಿ ಒಂದರೆಡು ಅಡಿ ನೀರು ಇರ್ತಿದ್ದಿದ್ದು ಸಾಮಾನ್ಯವಾಗಿತ್ತು. ಸಂಜೆ ಶಾಲೆ ಮುಗಿಸ್ಕೊಂಡು ವಾಪಾಸ್ ಮನೆಗೆ ಹೋಗುವಾಗ ನಮ್ಮ ಸಂಭ್ರಮ ಕೇಳೋದೇ ಬೇಡ. ಎಡಗಾಲನ್ನು ನೀರಿಗೆ ಊರಿಕೊಂಡು ಬಲಗಾಲಲ್ಲಿ ನೀರು ರಟ್ಟಿಸ್ತಾ ಇದ್ದಿದ್ದು ಪ್ರತಿದಿನದ ಕೆಲಸ.. ಕೊನೆಗೆ ಮನೆ ಸೇರುವಷ್ಟರಲ್ಲಿ ನಮ್ಮ ಬಟ್ಟೆಗಳೆಲ್ಲ ಕೆಸರಾಗಿರ್ತಿತ್ತು. ಇದಕ್ಕೆ ಅಮ್ಮನಿಂದ ಬೈಗುಳವೂ ಸಿಗ್ತಿತ್ತು. ಅಷ್ಟಾದ್ರೂ ಮರುದಿನ ಮತ್ತೆ ಹಾಗೇ ಮಾಡ್ತಿದ್ವಿ... ಇನ್ನು ಮೊದಲ ಮಳೆ ಬಂದಾಗ ಮೀನು ಹಿಡಿಯೋದು ಒಂದು ಕೆಲಸವಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ಮಳೆಗೆ ಗದ್ದೆ, ತೋಟಗಳ ನೀರು ಸಮೀಪದ ತೋಡಿಗೆ ಹರಿದು ಹೋಗ್ತಿತ್ತು. ಆಗ ತೋಡಿನಲ್ಲಿರುವ ಮೀನುಗಳೆಲ್ಲ ತೋಟ, ಗದ್ದೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಬರ್ತಿತ್ತು. ಅದು ಮೀನುಗಳು ಮೊದಲ ಮಳೆಯನ್ನು ಸಂಭ್ರಮಿಸುವ ರೀತಿ.. ನೀರಿನಿಂದ ಮೇಲಕ್ಕೆ ಹಾರುತ್ತಾ ತೋಟಕ್ಕೆ ನುಗ್ಗುವ ಮೀನುಗಳನ್ನು ಹಿಡಿಯೋದು ನಮ್ಮ ಸಂಭ್ರಮದ ಭಾಗವಾಗಿತ್ತು. ಹೆಚ್ಚೆಂದರೆ ನಾಲ್ಕೋ ಐದೋ ಮೀನುಗಳು ಸಿಗ್ತಿತ್ತು. ಆದ್ರೆ ಅದನ್ನು ಮನೆಗೆ ತಗೊಂಡು ಹೋಗಿ ಅಮ್ಮನ ಬಳಿ ಕೊಟ್ಟು ಪದಾರ್ಥ ಮಾಡಿಸಿ, ತಿನ್ನೋವರೆಗೆ ಸಮಾಧಾನ ಆಗ್ತಿರ್ಲಿಲ್ಲ. ರಜಾದಿನಗಳಲ್ಲಿ ತೋಡಿನಲ್ಲಿ ಈಜಾಡೋಕೆ ಹೋಗ್ತಿದ್ವಿ. ಆಗ ಅಪ್ಪನ ಹಳೆಯ ಪಂಚೆ ತಗೊಂಡು ಹೋಗಿ, ಅದರ ತುದಿಯನ್ನು ಎರಡೂ ಬದಿಯಲ್ಲಿ ಹಿಡ್ಕೊಂಡು ನೀರಿನಲ್ಲಿ ಮೀನು ಹಿಡೀತಿದ್ವಿ. ಅವೆಲ್ಲ ತುಂಬಾ ಸಣ್ಣಪುಟ್ಟ ಮೀನುಗಳು.. ಆ ಮೀನುಗಳನ್ನು ಪುಟ್ಟದೊಂದು ಡಬ್ಬಿಯಲ್ಲಿ ಹಾಕೊಂಡು ಮನೆಗೆ ತಗೊಂಡು ಹೋಗಿ ಬಾವಿಗೆ ಹಾಕ್ತಿದ್ವಿ. ಆಮೇಲೆ ದಿನಾ ಬಾವಿಯಲ್ಲಿ ಇಣುಕಿ ನೋಡೋದೇ ಕೆಲಸ.. ಮೀನು ದೊಡ್ಡಾದಾಗಿದ್ಯಾ ಅಂತ...
ಸಂಜೆ ಅಥವಾ ರಾತ್ರಿ ಭಾರೀ ಸಿಡಿಲು-ಗುಡುಗು ಇದ್ರೆ ಬೆಳಗಾಗೆದ್ದು ತೋಟದಲ್ಲಿ ಸುತ್ತಾಡೋದೇ ಕೆಲಸವಾಗ್ತಿತ್ತು.. ಯಾಕೆ ಗೊತ್ತಾ.. ಅಣಬೆ ಹುಡುಕೋಕೆ.. ಸಾಮಾನ್ಯವಾಗಿ ಸಿಡಿಲು-ಗುಡುಗು ಜಾಸ್ತಿ ಇದ್ದ ಮರುದಿನ ಅಣಬೆಗಳು ಹುಟ್ಟಿಕೊಳ್ತಿತ್ತು. ಅದಕ್ಕೆ ವೈಜ್ಞಾನಿಕ ಕಾರಣಗಳು ಏನಿದ್ಯೋ ಗೊತ್ತಿಲ್ಲ. ಆದ್ರೆ ನಾನಂತೂ ಮಿಸ್ ಇಲ್ದೆ ತೋಟದಲ್ಲಿ ಹುಡುಕಾಡ್ತಿದ್ದೆ. ಅಲ್ಲೊಂದು ಇಲ್ಲೊಂದು ಪುಟ್ಟ ಅಣಬೆ ಸಿಗ್ತಿತ್ತು. ಇನ್ನು ಮನೆ ಹಿಂಭಾಗಕ್ಕೆ ಇದ್ದ ಪುಟ್ಟ ಕಾಡಿನಲ್ಲಿ ಕೆಲವು ದೊಡ್ಡ ಮರಗಳ ಕೆಳಗೆ ನೂರಾರು ಸಂಖ್ಯೆಯಲ್ಲಿ ಅಣಬೆಗಳು ಹುಟ್ಟುತ್ತಿತ್ತು. ಅದನ್ನೆಲ್ಲ ಕೊಯ್ದು ಗೋಣಿ ಚೀಲದಲ್ಲಿ ಕಟ್ಕೊಂಡು ಮನೆಗೆ ಬರೋದು, ಬಿದಿರಿನ ರಾಶಿಯ ಮಧ್ಯೆ ಕಣಿಲೆ ಹುಡುಕೋದು... ಇವೆಲ್ಲ ನಮ್ಮ ಶಾಲಾ ಬದುಕಿನ ನಿತ್ಯ ಕೆಲಸಗಳಾಗಿರ್ತಿತ್ತು. ಸಂಜೆಯಾದ್ರೆ ತೋಟದ ನಡುವೆ ನವಿಲುಗಳು ಗರಿ ಬಿಚ್ಚಿ ಕುಣಿಯುತ್ತಾ ಹಾರಾಡ್ತಿತ್ತು. ಇನ್ನು ಮರಗೆಣಸು ನೆಡ್ತಿದ್ದ ಜಾಗದಲ್ಲಿ ಮೊಲಗಳ ಕಾಟ ಇರ್ತಿತ್ತು. ಮರಗೆಣಸಿನ ಗಿಡ ದೊಡ್ಡದಾಗ್ತಿದ್ದಂಗೆ ಅದರ ಎಲೆಗಳನ್ನು ತಿನ್ನೋಕೆ ಮೊಲಗಳು ಬರ್ತಿತ್ತು. ಬೆಳಗೆದ್ದು ನೋಡಿದ್ರೆ ಬಹುತೇಕ ಮರಗೆಣಸಿನ ಗಿಡಗಳಿಗೆ ಎಲೆಗಳೇ ಇರ್ತಿರ್ಲಿಲ್ಲ.. ಆಗಿನ ಕಾಲಕ್ಕೆ ಮರಗೆಣಸೇ ನಮ್ಮ ಹಸಿವನ್ನು ನೀಗಿಸ್ತಾ ಇದ್ದಿದ್ದು.. ಹಾಗಾಗಿ ಮರಗೆಣಸು ನೆಡ್ತಿದ್ದ ಜಾಗದಲ್ಲಿ ತಂತಿಯ ಉರುಳು ಇಡ್ತಿದ್ವಿ. ಉರುಳು ಅಂದ್ರೆ ಉದ್ದದ ತಂತಿಯನ್ನು ವೃತ್ತಾಕಾರದಲ್ಲಿ ಜೋಡಿಸಿ ಎರಡು ಕಡೆ ಸಣ್ಣ ಕೋಲು ನೆಟ್ಟು ಅದಕ್ಕೆ ಕಟ್ಟೋದು. ಅದರ ಅಕ್ಕಪಕ್ಕಕ್ಕೆ ಸೊಪ್ಪುಗಳನ್ನು ಹಾಕ್ತಿದ್ವಿ. ರಾತ್ರಿ ಎಲೆ ತಿನ್ನೋಕೆ ಬರುವ ಮೊಲಗಳು ಈ ಉರುಳಿನಲ್ಲಿ ಸಿಕ್ಕಿ ಹಾಕಿಕೊಳ್ತಿತ್ತು...
ಸಂಜೆ ಕ್ರಿಕೆಟ್ ಆಡೋದು ಉಳಿದೆಲ್ಲ ಕೆಲಸಗಳಿಗಿಂತ ಫೇವರೀಟ್. ಸ್ಕೂಲ್ ಮುಗಿಸ್ಕೊಂಡು ಮನೆಗೆ ಬಂದ್ರೆ ಸಾಕು... ಬ್ಯಾಗ್ ಎಲ್ಲೋ ಎಸೆದು ಹಳೆಯದೊಂದು ಡ್ರೆಸ್ ಹಾಕೊಂಡು ಗ್ರೌಂಡ್‌ಗೆ ಓಡ್ತಿದ್ವಿ. ತೋಟದಲ್ಲಿದ್ದ ನೇರವಾದ ಗಿಡಗಳೆಲ್ಲ ನಮ್ಮ ವಿಕೆಟ್‌ಗಳಾಗ್ತಿತ್ತು. ಆ ಗಿಡವನ್ನು ಕತ್ತರಿಸಿ ಸಿಪ್ಪೆ ತೆಗೆದು ಅದಕ್ಕೆ ಪೆಪ್ಸಿಯ ಸ್ಕಿಕ್ಕರ್ ಅಂಡಿಸ್ತಿದ್ವಿ. ತೀರಾ ಸಣ್ಣದಿದ್ದಾಗ ತೆಂಗಿನ ಮರದ ಗರಿಯ ಬ್ಯಾಟ್‌ಗಳು ಹೆಚ್ಚಾಗಿತ್ತು. ಬರ್ತಾ ಬರ್ತಾ ಮರದ ಬ್ಯಾಟ್‌ಗಳನ್ನು ತಯಾರಿಸೋಕೆ ಶುರು ಮಾಡಿದ್ವಿ. ಟಿವಿಯಲ್ಲಿ ಕ್ರಿಕೆಟ್ ಅಟಗಾರರು ಬಳಸುವ ರೀತಿಯಲ್ಲಿ ಆ ಬ್ಯಾಟ್‌ಗೆ ಸ್ಟಿಕ್ಕರ್ ಅಂಟಿಸಿ ಆನಂದ ಪಡ್ತಿದ್ವಿ. ರೈಟ್ ಹ್ಯಾಂಡ್ ಬ್ಯಾಟಿಂಗ್ ಮಾಡೋವ್ರು ಸಹ ಗಂಗೂಲಿ ರೀತಿಯಲ್ಲಿ ಎರಡು ಸ್ಟೆಪ್ ಮುಂದೆ ಬಂದು ಸಿಕ್ಸರ್ ಬಾರಿಸೋಕೆ ಪ್ರಯತ್ನ ಪಡ್ತಿದ್ವಿ. ಶೋಯೆಬ್ ಅಖ್ತರ್ ಬೌಲಿಂಗ್ ನೋಡಿದ ಮೇಲೆ ಗ್ರೌಂಡ್‌ನ ಬೌಂಡರಿ ಲೈನ್‌ನಿಂದನೇ ಓಡ್ಕೊಂಡು ಬಂದು ಬೌಲಿಂಗ್ ಮಾಡೋದು ಸ್ಟೈಲ್ ಆಗಿತ್ತು. ಸಂಜೆ ನಾಲ್ಕು ಗಂಟೆಗೆ ಮ್ಯಾಚ್ ಆಡೋ ಮೊದ್ಲು ತಣ್ಣಗೆ ಮಳೆ ಬಂದಿದ್ರೆ ಬೌಲರ್‌ಗಳಿಗೆ ಖುಷಿ.. ಪಿಚ್ ಬೌನ್ಸ್ ಆಗುತ್ತೆ ಅಂತ.. ಆರು ಓವರ್‌ಗಳ ಮ್ಯಾಚ್‌ ಆದ್ರೂ, ಆರು ಓವರ್ ಮುಗಿಯೋ ಮೊದ್ಲೇ ಬ್ಯಾಟ್ಸ್‌ಮನ್‌ಗಳೆಲ್ಲ ಔಟ್ ಆಗ್ತಿದ್ರು. ರಜಾ ದಿನಗಳಂದು ಬೆಳಿಗ್ಗೆಯೇ ನಮ್ಮ ಟೆಸ್ಟ್ ಕ್ರಿಕೆಟ್ ಆರಂಭವಾಗ್ತಿತ್ತು. ಅರ್ಧ ದಿನ ಆಗ್ತಿದ್ದಂಗೆ ಎರಡೂ ಕಡೆಯ ಬ್ಯಾಟ್ಸ್‌ಮನ್‌ಗಳು ಔಟ್ ಆಗಿ ಮ್ಯಾಚ್ ಮುಗ್ದೋಗ್ತಿತ್ತು. ಮನೆಗೆ ಬಂದ ಮೇಲೆ ಎಡಗೈಯಲ್ಲಿ ಗೋಡೆಗೆ ಬಾಲ್ ಎಸೆಯುತ್ತಾ ಬ್ಯಾಟಿಂಗ್ ಪ್ರಾಕ್ಟೀಸ್.. ಅಕ್ಕಪಕ್ಕದ ಯಾವುದೇ ಊರುಗಳಲ್ಲಿ ಮ್ಯಾಚ್ ಇದ್ರೂ ನಮ್ಮ ತಂಡ ಅಲ್ಲಿ ಹಾಜರಿರ್ತಿತ್ತು. ಕ್ಲಾಸ್‌ಗೆ ಚಕ್ಕರ್ ಹೊಡೆದು ಮ್ಯಾಚ್ ಆಡೋಕೆ ಹೋಗೋದೇ ಒಂದು ಮಜಾ.. ಸಾಮಾನ್ಯವಾಗಿ ಲೀಗ್ ಅಥವಾ ಕ್ವಾರ್ಟರ್ ಫೈನಲ್ ಹಂತದಲ್ಲೇ ಸೋತು ವಾಪಾಸಾಗ್ತಿದ್ವಿ. ಎಷ್ಟು ಮ್ಯಾಚ್ ಸೋತ್ರೂ ಪರ್ವಾಗಿಲ್ಲ, ಮುಂದಿನ ಬಾರಿ ಮತ್ತೆ ಟೂರ್ನಮೆಂಟ್ ಇದ್ದಾಗ ಪಾಲ್ಗೊಳ್ಳೋದನ್ನು ಮಾತ್ರ ಮಿಸ್ ಮಾಡ್ತಿರ್ಲಿಲ್ಲ.