ಎರಡು ದಿನಗಳ ರಜೆಯ ನಿಮಿತ್ತ ಶುಕ್ರವಾರವಷ್ಟೇ ಊರಿಗೆ ಹೋಗಿದ್ದೆ.. ಶನಿವಾರ ಬೆಳಿಗ್ಗೆ ಎದ್ದು ಟಿವಿ ಹಾಕ್ತಿದ್ದಂಗೆ ಬೆಳ್ತಂಗಡಿ ಸಮೀಪ ಸವಣಾಲು ಗ್ರಾಮದಲ್ಲಿ ನಕ್ಸಲರು ಮತ್ತು ಪೊಲೀಸರ ಮಧ್ಯೆ ನಡೆದ ಗುಂಡಿನ ಚಕಮಕಿಯ ಬ್ರೇಕಿಂಗ್ ನ್ಯೂಸ್ ಬರ್ತಿತ್ತು. ಎಎನ್ಎಫ್ ಸಿಬ್ಬಂದಿ ಮೃತಪಟ್ಟ ಬಗ್ಗೆಯೂ ವರದಿ ಪ್ರಸಾರವಾಗ್ತಿತ್ತು. ಫೋನ್ ಮೂಲಕ ಸ್ಥಳೀಯ ವರದಿಗಾರರಿಂದ ಕೆಲವು ಮಾಹಿತಿ ಪಡೆದ ನಾನು ಕಚೇರಿಗೆ ಫೋನಾಯಿಸಿ ಕೆಲವು ಪಾಯಿಂಟ್ಸ್ ಕೊಟ್ಟಿದೆ. 9 ಗಂಟೆ ನ್ಯೂಸ್ ಗೆ ನಂಗೆ ಫೋನೋ ಕನೆಕ್ಟ್ ಮಾಡಿದ್ರು...
ಮತ್ತೆ ಮನೆಯಲ್ಲಿ ಸಣ್ಣಪುಟ್ಟ ಕೆಲಸಗಳನ್ನೆಲ್ಲ ಮುಗಿಸಿಕೊಂಡು ಮಧ್ಯಾಹ್ನ ಎಷ್ಟೊತ್ತಿಗೋ ಟಿವಿ ಆನ್ ಮಾಡಿದಾಗ ಮಹದೇವ ಮಾನೆ ಅನ್ನೋ ಎಎನ್ಎಫ್ ಸಿಬ್ಬಂದಿ ಮೃತಪಟ್ಟ ಬಗ್ಗೆ ಹೆಚ್ಚಿನ ಮಾಹಿತಿ ಗೊತ್ತಾಯ್ತು. ನಕ್ಸಲರ ಜೊತೆಗಿನ ಗುಂಡಿನ ಚಕಮಕಿಯಲ್ಲಿ ಮಾನೆಯ ಬೆನ್ನಿಗೆ ಗುಂಡು ಬಿದ್ದ ವಿಷಯ ಗೊತ್ತಾದಾಗ ಶಾಕ್ ಆಯ್ತು.. ಯಾಕಂದ್ರೆ ಗುಂಡಿನ ಚಕಮಕಿಯ ವೇಳೆ ಹೊಟ್ಟೆಗೆ ಗಂಡು ಬೀಳೋದು ಸಹಜ. ಆದ್ರೆ ಬೆನ್ನಿಗೆ ಬೀಳ್ಬೇಕಾದ್ರೆ ನಕ್ಸಲರು ಹಿಂದಿನಿಂದ ಗುಂಡು ಹೊಡೆದ್ರಾ ಅನ್ನೋದು ಪ್ರಶ್ನೆ..

ಇದೇ ಕುತೂಹಲದಲ್ಲಿ ಮರುದಿನ ಕೆಲವು ವರದಿಗಾರರಲ್ಲಿ ಈ ಬಗ್ಗೆ ವಿಚಾರಿಸಿದೆ. ಕೆಲವರು ಹೇಳಿದ್ರು, ಇದು ನಕ್ಸಲರು ಹಾರಿಸಿದ ಗುಂಡಲ್ಲ, ಬದಲಾಗಿ ಎಎನ್ಎಫ್ ಸಿಬ್ಬಂದಿಗಳ ಬಂದೂಕಿನಿಂದಲೇ ಸಿಡಿದ ಗುಂಡು. ಆದ್ರೆ ತಮ್ಮ ತಪ್ಪನ್ನು ಮುಚ್ಚಿಹಾಕೋದಿಕ್ಕಾಗಿ ನಕ್ಸಲರ ವಿರುದ್ಧ ಬೊಟ್ಟು ಮಾಡಿ ತೋರಿಸಿದ್ದಾರೆ ಎಂದು.. ಮತ್ತೊಂದೆಡೆ, ಇಲ್ಲ ನಕ್ಸಲರ ಇರುವಿಕೆ ಗೊತ್ತಾಗಿ ಎಎನ್ಎಫ್ ಸಿಬ್ಬಂದಿಗಳು ಗುಂಡು ಹಾರಿಸೋಕೆ ಮುಂದಾಗಿದ್ರು. ಆದ್ರೆ ರೈಫಲ್ ಕೈಕೊಟ್ಟ ಕಾರಣದಿಂದಾಗಿ ಹಿಂದಕ್ಕೋಡಿದ್ರು. ಈ ಸಂದರ್ಭದಲ್ಲಿ ನಕ್ಸಲರು ಹಾರಿಸಿದ ಗುಂಡು ಮಾನೆ ಅವರ ಬೆನ್ನಿಗೆ ಹೊಕ್ಕಿತು ಅನ್ನೋದು ಇನ್ನೂ ಕೆಲವರ ಅಭಿಪ್ರಾಯ.. ಈ ಬಗ್ಗೆ ಬಿಪಿನ್ ಗೋಪಾಲಕೃಷ್ಣ ನೇತೃತ್ವದ ತಂಡ ತನಿಖೆ ಪೂರ್ಣಗೊಳಿಸಿದ ಮೇಲಷ್ಟೇ ಸತ್ಯ ಹೊರಬೀಳಲಿದೆ. ಆದ್ರೆ ಒಂದಂತೂ ಸತ್ಯ, ಎಎನ್ಎಫ್ ಸಿಬ್ಬಂದಿಗಳು ಹಾರಿಸಿದ ಗುಂಡಿನಿಂದಲೇ ಮಾನೆ ಮೃತಪಟ್ಟಿದ್ದು ಧೃಢವಾದ್ರೆ ಆ ಸತ್ಯ ಹೊರಜಗತ್ತಿಗೆ ತಿಳಿಯುವ ಸಾಧ್ಯತೆಗಳು ತೀರಾ ಕಡಿಮೆ...!

ಬೆಳ್ತಂಗಡಿ ತಾಲೂಕಿನಲ್ಲಿ ನಕ್ಸಲ್ ಚಟುವಚಿಕೆ ಇದೆ ಅನ್ನೋದು ಹೊರಜಗತ್ತಿಗೆ ಗೊತ್ತಾಗಿದ್ದೇ ಕಳೆದ ಮೂರು ವರ್ಷಗಳಿಂದೀಚೆಗೆ.. ಬೆಳ್ತಂಗಡಿಯ ಕುತ್ಲೂರು ಗ್ರಾಮದಲ್ಲಿ ಅಕ್ರಮವಾಗಿ ನಕ್ಸಲರು ಅಡಗಿಸಿಟ್ಟಿದ್ದ ಶಸ್ತ್ರಾಸ್ತ್ರಗಳು ದೊರೆತ ಮೇಲಷ್ಟೇ ಇದು ಗೊತ್ತಾಗಿದ್ದು. ಆದ್ರೆ ಇದಕ್ಕೂ ಮುನ್ನವೇ ಇಲ್ಲಿ ನಕ್ಸಲ್ ಚಟುವಟಿಕೆ ಇತ್ತೋ ಇಲ್ವೋ ಅನ್ನೋದು ಗ್ರಾಮಸ್ಥರಿಗಷ್ಟೇ ಗೊತ್ತು. ಯಾಕಂದ್ರೆ ಸಾಮಾನ್ಯವಾಗಿ ಪಶ್ಚಿಮ ಘಟ್ಟಗಳ ತಪ್ಪಲಿನ ಹಳ್ಳಿಗಳಲ್ಲಿ ನಕ್ಸಲರು ಓಡಾಡ್ತಾನೇ ಇರ್ತಾರೆ.. ಗ್ರಾಮಸ್ಥರ ಮನಪರಿವರ್ತನೆ ಮಾಡೋಕೆ ಪ್ರಯತ್ನ ಮಾಡ್ತಾನೇ ಇರ್ತಾರೆ..

ಪುಷ್ಪಗಿರಿ ವನ್ಯಧಾಮ ವಿಸ್ತರಣೆ ವಿಚಾರ ಸದ್ಯಕ್ಕೆ ಬೆಳ್ತಂಗಡಿ, ಸುಳ್ಯ ಮತ್ತು ಪುತ್ತೂರು ತಾಲೂಕಿನ ಜನತೆಯ ನಿದ್ದೆಗೆಡಿಸಿದೆ. ಬೆಳ್ತಂಗಡಿ ತಾಲೂಕಿನ ಶಿಶಿಲ, ಶಿಬಾಜೆ, ಪುದುವೆಟ್ಟು, ಅರಸಿನಮಕ್ಕಿ ಮತ್ತು ನೆರಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ, ಸುಳ್ಯ ತಾಲೂಕಿನ ಸುಬ್ರಮಣ್ಯ, ಐನೆಕಿಡು, ಬಾಳುಗೋಡು, ಕಲ್ಮಕಾರು, ಕೊಲ್ಲಮೊಗ್ರ ಗ್ರಾಮಗಳು ಹಾಗೂ ಪುತ್ತೂರು ತಾಲೂಕಿನ ಗುಂಡ್ಯ, ಶಿರಾಡಿ, ಕೊಂಬಾರು, ಬಿಳಿನೆಲೆ ಸೇರಿದಂತೆ ಸುಮಾರು 50 ಗ್ರಾಮಗಳಿಗೆ ಪುಷ್ಪಗಿರಿ ಯೋಜನೆಯಿಂದ ತೊಂದರೆಯಾಗಲಿದೆ. ಈ ಗ್ರಾಮಗಳಲ್ಲಿ ವಾಸಿಸುವ ಜನರು ಬೀದಿಪಾಲಾಗುವ ಸ್ಥಿತಿ ಬಂದೊಗಿದೆ. ಸಹಜವಾಗಿಯೇ ಜನರು ಈ ಯೋಜನೆಯ ವಿರುದ್ಧ ಸೆಟೆದು ನಿಂತಿದ್ದಾರೆ. ಬಹುತೇಕ ಎಲ್ಲಾ ಗ್ರಾಮಗಳಲ್ಲಿ ಪುಷ್ಪಗಿರಿ ಯೋಜನೆಯ ವಿರುದ್ಧ ಹೋರಾಟ ಸಮಿತಿ ರಚನೆಯಾಗಿದೆ. ಈ ಹೋರಾಟ ಸಮಿತಿ ಇದೇ ತಿಂಗಳ 2 ರಂದು ಎಲ್ಲಾ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದಲ್ಲದೆ ಜಿಲ್ಲಾಧಿಕಾರಿಯವರಿಗೂ ಮನವಿ ಪತ್ರ ಸಲ್ಲಿಸಿದ್ರು. ಇಷ್ಟು ದಿನ ಶಾಂತಿಯುತವಾಗಿಯೇ ಪ್ರತಿಭಟನೆ ನಡೆಸಿರುವ ಗ್ರಾಮಸ್ಥರು ಒಂದೊಮ್ಮೆ ಈ ಯೋಜನೆ ಜಾರಿಯಾದ್ರೆ ಬೀದಿಗಿಳಿದು ಹೋರಾಡೋದಂತೂ ಖಚಿತ..

ಇಲ್ಲಿ ಗಮನಿಸಬೇಕಾದ ಒಂದು ಅಂಶವಿದೆ. ಈ ಬಗ್ಗೆ ಸರ್ಕಾರ ಸಹ ಚಿಂತನೆ ನಡೆಸಬೇಕಿದೆ. ನಕ್ಸಲ್ ಚಟುವಟಿಕೆಗಳು ಹೆಚ್ಚಾಗಿ ಗರಿಗೆದರುವುದೇ ಇಂತಹ ಸಂದರ್ಭಗಳಲ್ಲಿ. ಎಲ್ಲಿ ಗ್ರಾಮಸ್ಥರು ಸರ್ಕಾರದ ವಿರುದ್ಧ ತೊಡೆತಟ್ಟಿ ನಿಲ್ತಾರೋ, ನಕ್ಸಲರು ಅಲ್ಲಿ ಹಾಜರಾಗ್ತಾರೆ.. ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಾ, ಗ್ರಾಮಸ್ಥರ ನೆರವಿಗೆ ಧಾವಿಸುವ ನಕ್ಸಲರು ಪರಿಸ್ಥಿತಿಯ ಲಾಭ ಪಡೆಯೋಕೆ ಪ್ರಯತ್ನಿಸ್ತಾರೆ. ಸರ್ಕಾರದ ವಿರುದ್ಧ ತಿರುಗಿ ಬಿದ್ದ ಜನರನ್ನು ನಕ್ಸಲ್ ಚಟುವಟಿಕೆಗೆ ಸೇರಿಕೊಳ್ಳಲು ಆಹ್ವಾನಿಸ್ತಾರೆ, ಪ್ರಚೋದಿಸುತ್ತಾರೆ.. ಅವರ ಮನಪರಿವರ್ತನೆಗೆ ಬೇಕಾದ ಎಲ್ಲಾ ಕೆಲಸಗಳನ್ನು ಮಾಡ್ತಾರೆ.. ಮಾನಸಿಕವಾಗಿ ಧೈರ್ಯ ತುಂಬುವ ಜೊತೆಗೆ ಆರಂಭದಲ್ಲಿ ಜೇಬು ತುಂಬಿಸುವ ಕೆಲಸವನ್ನೂ ಮಾಡ್ತಾರೆ.. ಮನೆ ಕಳೆದುಕೊಳ್ಳುವ ಭೀತಿಯಲ್ಲಿರುವ ಕುಟುಂಬಗಳಲ್ಲಿ ವಿದ್ಯಾವಂತ ಯುವಕರಿದ್ದರೆ ಅಂತವರನ್ನು ಮೊದಲು ತಮ್ಮ ನಕ್ಸಲ್ ಪಡೆಗೆ ಸೇರಿಕೊಳ್ಳುವಂತೆ ಪ್ರೇರೇಪಿಸುತ್ತಾರೆ.. ನಕ್ಸಲರು ಪಶ್ಚಿಮ ಘಟ್ಟಗಳಲ್ಲಿ ತಮ್ಮ ಸಂಖ್ಯೆ ಹೆಚ್ಚು ಮಾಡಿಕೊಳ್ಳಲು ಕಂಡುಕೊಂಡಿರುವ ಉಪಾಯ ಇದೇ.. ಪುಷ್ಪಗಿರಿ ಅಭಯಾರಣ್ಯ ಯೋಜನೆಗೆ ಸರ್ಕಾರ ಫುಲ್ ಸ್ಟಾಪ್ ಹಾಕದಿದ್ರೆ ಈ ರೀತಿಯ ನಕ್ಸಲ್ ಚಟುವಟಿಕೆ ತನ್ನ ಕಬಂಧ ಬಾಹುವನ್ನು ವಿಸ್ತರಿಸೋದ್ರಲ್ಲಿ ಸಂಶಯವಿಲ್ಲ. ಸಾಮಾನ್ಯವಾಗಿ ಕುದುರೆಮುಖ ಮತ್ತು ಚಿಕ್ಕಮಗಳೂರು ಪ್ರದೇಶಗಳಿಗೆ ಹೊಂದಿಕೊಂಡಿರುವ ಪಶ್ಟಿಮ ಘಟ್ಟಗಳ ಕಾಡುಗಳಲ್ಲಿ ಅಲೆಯುವ ನಕ್ಸಲರಿಗೆ ಅದೇ ಕಾಡಿನ ಮೂಲಕ ಚಾರ್ಮಾಡಿ ಮಾರ್ಗವಾಗಿ ನೆರಿಯಾ, ಪುದುವೆಟ್ಟು, ಮೀಯಾರು, ಶಿಶಿಲ, ಶಿಬಾಜೆ, ಅರಸಿನಮಕ್ಕಿ, ಗುಂಡ್ಯ, ಶಿರಾಡಿ ಸೇರಿದಂತೆ ಮೂರು ತಾಲೂಕುಗಳಿಗೆ ಪ್ರವೇಶ ಮಾಡೋದು ಕಷ್ಟವೇನಲ್ಲ.

ಇದು ಹೀಗೆ ಅಗುತ್ತದೆ ಅನ್ನೋ ಕಠಿಣ ನುಡಿಗಳಲ್ಲ. ಆದ್ರೆ ಹೀಗೂ ಆಗಬಹುದಾದ ಸಾಧ್ಯತೆಗಳಿವೆ ಎಂದು ಹೇಳಿದನಷ್ಟೇ.. ಸರ್ಕಾರದ ಯೋಜನೆಗಳು ಜನರಿಗೆ ಮಾರಕವಾಗುವಾಗ ಅದರ ಲಾಭ ಪಡೆಯೋಕೆ ನಕ್ಸಲರು ಪ್ರಯತ್ನಪಡಬಹುದು ಎಂದು ಅನಿಸ್ತು.. ಅದಕ್ಕೇ ಈ ಪುಟ್ಟ ಬರಹ.. ಹಾಗಂತ ನಕ್ಸಲ್ ವಿರೋಧಿಯಾಗಿ ಅಥವಾ ನಕ್ಸಲ್ ಪರವಾಗಿ ಇದ್ದೇನೆ ಎಂದೂ ಅಲ್ಲ.. ಇತ್ತೀಚೆಗೆ ಊರಿಗೆ ಹೋಗಿದ್ದಾಗ ಸಂಬಂಧಿಕರ ಮನೆಗೆಂದು ಪುದುವೆಟ್ಟಿಗೆ ಹೋದಾಗ ಅನಿಸಿದ ವಿಷಯಗಳಿವು...