Sunday, February 19, 2017

ಬಾಲ್ಯದ ನೆನಪುಗಳು..

ವೃತ್ತಿ ಜೀವನ ಆರಂಭವಾಗಿ 10 ವರ್ಷಗಳು ಆಗ್ತಾ ಬಂತು.. ಅಪರೂಪಕ್ಕೊಮ್ಮೆ ಬಿಡುವು ಸಿಕ್ಕಾಗ ಹಳೆಯ ದಿನಗಳೆಲ್ಲ ನೆನಪಾಗುತ್ತೆ.. Especially ಶಾಲೆಗೆ ಹೋಗ್ತಿದ್ದ ದಿನಗಳು.. ಆ ದಿನಗಳು ಇನ್ನೆಂದಿಗೂ ಮರಳಿ ಬರಲ್ಲ.. ಈಗಿನ ಮಕ್ಕಳಿಗೆ ಆ ದಿನಗಳು ಸಿಗೋದೂ ಇಲ್ಲ.. ಆದ್ರೆ ಈಗ ಆ ದಿನಗಳನ್ನು ನೆನೆಸಿಕೊಳ್ಳೋದೆ ಒಂಥರಾ ಖುಷಿ..
ಮನೆಯಲ್ಲಿ ನನ್ನ ಕಾಟ ತಡೆಯೋಕಾಗ್ದೆ ಒಂದು ವರ್ಷ ಮೊದ್ಲೇ ಅಂಗನವಾಡಿಗೆ ಸೇರಿಸಿದ್ರು. ಅಂಗನವಾಡಿ ಮನೆಯಿಂದ ತುಂಬಾ ಹತ್ತಿರ ಇತ್ತು. ಆಗ ನಮ್ಮ ಅಂಗನವಾಡಿಯಲ್ಲಿ ಜಾನಕಿ ಟೀಚರ್ ಪಾಠ ಮಾಡ್ತಿದ್ರು. ಚಡ್ಡಿ ಹಾಕೊಂಡು ಅಂಗನವಾಡಿಗೆ ಹೋಗ್ತಿದ್ದ ದಿನಗಳು.. ಹೆಚ್ಚಾಗಿ ಅಮ್ಮನೇ ನನ್ನನ್ನು ಅಂಗನವಾಡಿಗೆ ಕರ್ಕೊಂಡು ಹೋಗ್ತಾ ಇದ್ದಿದ್ದು. ಒಮ್ಮೊಮ್ಮೆ ಅಪ್ಪ.. ಅಂಗನವಾಡಿ ಸಮೀಪವೇ ಇದ್ದ ಥಾಮಸ್ ಅವರ ಮಿಠಾಯಿ ಅಂಗಡಿ. 5 ಪೈಸೆಗೆ ಸಿಗ್ತಾ ಇದ್ದ ಮಿಠಾಯಿ ಮುಂದೆ ಈಗಿನ ಯಾವ ಚಾಕ್ಲೇಟುಗಳೂ ಸಾಠಿಯಾಗಲ್ಲ. ಆಗ ಅಂಗನವಾಡಿಯಲ್ಲಿ ಮಧ್ಯಾಹ್ನ ಉಂಡೆ ಕೊಡ್ತಿದ್ರು. ಅದ್ರ ಹೆಸ್ರು ಮರ್ತೋಗಿದೆ.. ಬಟ್ ಅದ್ರ ರುಚಿ ಮಾತ್ರ ಇನ್ನೂ ಬಾಯಲ್ಲಿ ನೀರೂರಿಸುತ್ತೆ. ಪ್ಯಾಕೆಟ್ ರೂಪದಲ್ಲಿ ಬರ್ತಿದ್ದ ಹುಡಿಯನ್ನು ಅಂಗನವಾಡಿಯ ಆಯಾ, ದೊಡ್ಡದೊಂದು ಪಾತ್ರೆಯಲ್ಲಿ ಹಾಕಿ, ಅದಕ್ಕೊಂಚೂರು ನೀರು ಮಿಕ್ಸ್ ಮಾಡಿ ಉಂಡೆ ಮಾಡ್ತಿದ್ರು. ಒಬ್ಬರಿಗೆ ಸಾಮಾನ್ಯವಾಗಿ ಎರಡು ಉಂಡೆ ಸಿಗ್ತಿತ್ತು. ಕೆಲವೊಮ್ಮೆ ಅಂಗನವಾಡಿಯ ಸ್ಟೋರ್ ರೂಮ್‌ನಲ್ಲಿ ಪ್ಯಾಕೆಟ್‌ನಲ್ಲಿ ಮಿಕ್ಕಿದ ಹುಡಿಯನ್ನು ನಾವು ಅಂಗೈಗೆ ಹಾಕೊಂಡು ತಿನ್ತಿದ್ವಿ. ಆಗ ಆ ಹುಡಿ ಕೆನ್ನೆಯ ತುಂಬೆಲ್ಲಾ ಇರ್ತಿತ್ತು...
ಅಂಗನವಾಡಿ ಬಳಿಕ ಮನೆಯಿಂದ ಸುಮಾರು ನಾಲ್ಕು ಕಿಲೋಮೀಟರ್ ದೂರದ ಮುಂಡ್ರುಪ್ಪಾಡಿ ಶಾಲೆಯಲ್ಲಿ ನನ್ನ ಒಂದನೇ ತರಗತಿ ವ್ಯಾಸಂಗ. ನಾಲ್ಕು ಕಿಲೋಮೀಟರ್ ನಡ್ಕೊಂಡು ಹೋಗೋದು ಆಗ ತುಂಬಾ ಕಷ್ಟ ಆಗ್ತಿತ್ತು. ಮಳೆಗಾಲದಲ್ಲಂತೂ ಕೈಯಲ್ಲೊಂದು ಕೊಡೆ ಹಿಡ್ಕೊಂಡು ಬ್ಯಾಗ್ ಒದ್ದೆಯಾಗದಂತೆ ಹೋಗೋದು ಪ್ರಯಾಸದ ಕೆಲಸ. ಅದು ಕಾಲು ಬೆಂಡಾಗಿರುವ ಉದ್ದದ ಕೊಡೆ. ಅಲ್ಲಲ್ಲಿ ಸೋರ್ತಿತ್ತು. ಹಾಗಾಗಿ ಮನೆಯಿಂದ ಹೊರಡುವಾಗ್ಲೇ ಅಮ್ಮ ಪ್ಲಾಸ್ಟಿಕ್ ಕವರೊಂದನ್ನು ತಲೆ ಮೇಲೆ ಕಟ್ತಿದ್ರು. ಕೊಡೆ ಸೋರಿದ್ರೂ, ತಲೆ ಮೇಲೆ ನೀರು ಬೀಳ್ಬಾರ್ದು ಅಂತ.. ಇನ್ನು ಬೆನ್ನಿಗೆ ಬಟ್ಟೆಯ ಬ್ಯಾಗ್. ಅದರೊಳಗೊಂದು ಉದ್ದದ ಬುತ್ತಿ.. ಅದಕ್ಕೊಂದು ಅರ್ಧ ವರ್ತುಲಾಕಾರದ ಪುಟ್ಟ ಹಿಡಿ.. ಸಾಮಾನ್ಯವಾಗಿ ಆ ಬುತ್ತಿಯಲ್ಲಿ ಅನ್ನ ಅಥವಾ ಗಂಜಿ ಇರ್ತಿತ್ತು. ಶಾಲೆಗೆ ಹೋಗ್ತಾ ಪಾಪಚ್ಚಣ್ಣನ ಅಂಗಡಿಯಿಂದ 25 ಪೈಸೆಯ ಉಪ್ಪಿನಕಾಯಿ ಪ್ಯಾಕೆಟ್ ತಗೊಂಡು ಹೋಗ್ತಿದ್ದೆ. ಇನ್ನು ಆ ಬ್ಯಾಗ್‌ ಒಳಗೆ ಬೆರಳೆಣಿಕೆಯ ಪುಸ್ತಕಗಳು.. ಮರದ ಪಟ್ಟಿಯಿಂದ ಕೂಡಿದ ಒಂದು ಸ್ಲೇಟ್.. ಸ್ಲೇಟ್ ಒರೆಸಲು ಹಿತ್ತಲಲ್ಲಿ ಬೆಳೆಯುವ ಅದ್ಯಾವುದೋ ಗಿಡದ ಕಡ್ಡಿ.. ಪುಟ್ಟ ಬಿಳಿ ಮತ್ತು ಕಂದು ಬಣ್ಣದ ಪುಟ್ಟ ಚಾಕ್‌ನಲ್ಲಿ ಒಮ್ಮೆ ಬರೆದ ಮೇಲೆ, ಆ ಕಡ್ಡಿಯಿಂದ ಅದನ್ನು ಒರೆಸ್ತಿದ್ವಿ. ಆಗ ಕೆಲವರು ಪ್ಲಾಸ್ಟಿಕ್ ಸ್ಲೇಟ್ ತರ್ತಿದ್ರು. ನಮ್ಮ ಪಾಲಿಗೆ ಅವರೆಲ್ಲ ಶ್ರೀಮಂತರ ಮನೆಯ ಮಕ್ಕಳು.. ಮುಂಡ್ರುಪ್ಪಾಡಿಯ ಆ ಶಾಲೆಗೆ ಹೋಗುವಾಗ ಒಂದು ನೀರಿನ ಹಳ್ಳ ಬರ್ತಿತ್ತು. ನಾವದನ್ನು ತೋಡು ಅಂತ ಕರೀತಿದ್ವಿ. ಈ ತೋಡು ದಾಟಲು ಅಡಿಕೆ ಮರದ ಸೇತುವೆ.. ಅಡಿಕೆ ಮರದ ಸೇತುವೆ ಅಂತ ಗಾಬರಿಯಾಗ್ಬೇಡಿ.. ಅಡಿಕೆ ಮರವನ್ನು ಎರಡು ಅಥವಾ ನಾಲ್ಕು ಭಾಗ ಮಾಡ್ತಾರೆ. ಬಳಿಕ ಅದರ ಹೊರಭಾಗ ಮೇಲ್ಭಾಗದಲ್ಲಿ ಬರುವಂತೆ ಇಟ್ಟು ನಾಲ್ಕೈದು ಕಡೆ ಹಗ್ಗದಿಂದ ಕಟ್ತಾರೆ. ಇದು ಸಾಮಾನ್ಯವಾಗಿ 30 ರಿಂದ 40 ಅಡಿ ಉದ್ದ ಇರುತ್ತೆ. ಇದನ್ನೇ ತೋಡಿನ ಎರಡೂ ಕಡೆಯ ದಡಕ್ಕೆ ಮುಟ್ಟುವಂತೆ ಹಾಕಿರ್ತಾರೆ. ಈ ಎರಡೂ ಬದಿಯಲ್ಲಿ ಒಂದು ಮರದ ಕಂಬ ನೆಟ್ಟು, ಈ ಸೇತುವೆಗೆ ಹೊಂದಿಕೊಂಡಂತೆ ಉದ್ದಕ್ಕೆ ಹಗ್ಗ ಕಟ್ತಾರೆ. ಸೇತುವೆ ಮೇಲೆ ನಡೆದುಕೊಂಡು ಹೋಗುವವರು ಕೆಳಗೆ ಬೀಳದಂತೆ ಸಪೋರ್ಟೀವ್ ಆಗಿರ್ಲಿ ಅಂತ.. ಕೈಯಲ್ಲೊಂದು ಕೊಡೆ ಹಿಡ್ಕೊಂಡು, ಬೆನ್ನ ಮೇಲೆ ಬ್ಯಾಗ್ ಹಾಕೊಂಡು ಜೋರು ಮಳೆಯಲ್ಲಿ ಆ ಸೇತುವೆ ಮೇಲೆ ನಡೆಯೋಕೆ ಭಯ ಆಗ್ತಿತ್ತು. ಯಾಕಂದ್ರೆ ಅಡಿಕೆ ಮರದ ಸೇತುವೆ ಮೇಲೆ ನೀರು ಬಿದ್ದಾಗ ಅದು ಜಾರಲು ಶುರುವಾಗ್ತಿತ್ತು. ಆಗೆಲ್ಲ ಚಪ್ಪಲಿ ಹಾಕ್ತಾನೇ ಇರ್ಲಿಲ್ಲ. ಬರಿಗಾಲಲ್ಲೇ ಓಡಾಡ್ತ ಇದ್ದಿದ್ರಿಂದ ಸೇತುವೆ ಮೇಲೆ ಬ್ಯಾಲೆನ್ಸ್ ಮಾಡ್ಕೊಂಡು ಹೋಗ್ತಿದ್ವಿ. ಸಾಮಾನ್ಯವಾಗಿ ಮಳೆಗಾಲದಲ್ಲಿ ಆ ಸೇತುವೆ ಸಮೀಪದ ಮನೆಯ ಹಿರಿಯರು ಯಾರಾದ್ರೂ ಶಾಲೆಗೆ ಹೋಗುವ ಮಕ್ಕಳನ್ನು ಸೇತುವೆ ದಾಟಿಸೋಕೆ ಅಂತನೇ ಅಲ್ಲಿ ನಿಂತಿರ್ತಿದ್ರು.. ಮಳೆ ಅಂದ್ರೆ ಸುಮ್ಮನೆ ಒಂದರ್ಧ ಗಂಟೆ ಬಂದು ಹೋಗುವಂತದ್ದಾಗಿರ್ಲಿಲ್ಲ.. ರಾತ್ರಿ ವೇಳೆ ಶುರುವಾಗುವ ಮಳೆ ಸತತವಾಗಿ ಎರಡು ಮೂರು ದಿನ ಸುರಿಯುತ್ತಿತ್ತು. ಕೆಲವೊಮ್ಮೆ ಆ ಮಳೆಗೆ ನಮ್ಮ ಅಡಿಕೆ ಮರದ ಸೇತುವೆ ಸಹ ಮುಳುಗುತ್ತಿದ್ದರಿಂದ ಎಷ್ಟೋ ಬಾರಿ ಶಾಲೆಗೆ ಹೊರಟವರು ವಾಪಾಸ್ ಮನೆಗೆ ಹೋಗಿದ್ದೂ ಉಂಟು. ಆ ದಿನ ನನ್ನ ಖುಷಿಗೆ ಪಾರವೇ ಇರ್ತಿರ್ಲಿಲ್ಲ..
ಒಂದನೇ ತರಗತಿ ಮುಗಿಯುತ್ತಿದ್ದಂಗೆ ನನ್ನ ಶಾಲೆ ಬದಲಾಯ್ತು. ಧರ್ಮಸ್ಥಳದಲ್ಲಿರುವ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಗೆ ಸೇರ್ಪಡೆಗೊಂಡೆ. ಮನೆಯಿಂದ ಶಾಲೆಗೆ ಸುಮಾರು 2 ಕಿಲೋ ಮೀಟರ್. ಆಗ್ಲೂ ನಡ್ಕೊಂಡೇ ಹೋಗಿ ಬರ್ತಾ ಇದ್ದಿದ್ದು. ಆದ್ರೆ ಜೊತೆಗೆ ಗೆಳೆಯರು ತುಂಬಾ ಮಂದಿ ಇದ್ರು. ಅದರಲ್ಲಿ ಚೇತನ್ ಸಹ ಒಬ್ಬ.. ಅಂಗನವಾಡಿಯಿಂದ ಶುರುವಾದ ನಮ್ಮ ಸ್ನೇಹ ಇನ್ನೂ ಹಾಗೇ ಇದೆ.. 29 ವರ್ಷ ಕಳೆದರೂ.. ನಮ್ಮ ಜೊತೆಗೆ ಇನ್ನೂ ಹಲವಾರು ಮಂದಿ ಗೆಳೆಯರಿದ್ರು.. ಬಹುತೇಕ ನಾವೆಲ್ಲರೂ ನೆರೆಹೊರೆಯವರೇ.. ಹಾಗಾಗಿ ಶಾಲೆಗೆ ಹೋಗಿ ಬರೋದು ನಮ್ಮ ಪಾಲಿನ ಜಾಲಿ ಟ್ರಿಪ್ ಅಂತನೇ ಹೇಳ್ಬೋದು. ಶಾಲೆಗೆ ಹೋಗುವ ದಾರಿಯಲ್ಲಿ ಯಾವ ಮಾವಿನ ಮರವನ್ನೂ ಬಿಡ್ತಿರ್ಲಿಲ್ಲ.. ಸಣ್ಣ ಮಾವಿನಕಾಯಿ ಕಂಡ್ರೂ ಸಾಕು.. ನಮ್ಮ ಚೋಟಾ ಗ್ಯಾಂಗ್ ಕೈಯಲ್ಲಿ ಕಲ್ಲುಗಳನ್ನು ಹಿಡ್ಕೊಂಡು ರೆಡಿಯಾಗಿರ್ತಿದ್ವಿ. ಮರದ ಮೇಲಿನ ಮಾವಿನ ಕಾಯಿಗೆ ಕಲ್ಲು ಹೊಡೆಯೋಕೆ.. ಕೊನೆಗೆ ಯಾರೇ ಮಾವಿನಕಾಯಿ ಬೀಳಿಸಿದ್ರೂ, ಎಲ್ರೂ ಸೇರ್ಕೊಂಡು ಅದನ್ನು ಹಂಚ್ಕೊಂಡು ತಿನ್ತಿದ್ವಿ.
ಶಾಲೆಗೆ ಹೋಗ್ತಿದ್ದಾಗ ನಮ್ಮ ಮನೆಯ ಸಮೀಪವೇ ಸಣ್ಣದೊಂದು ನೀರಿನ ತೊರೆ ಹರಿಯುತ್ತಿತ್ತು. ಈಗ್ಲೂ ಇದೆ.. ಆದ್ರೆ ನೀರು ಕಡಿಮೆ. ಈ ತೊರೆ ಸಮೀಪದಲ್ಲೇ ಇರುವ ಮನೆಯವರು ಯಾವುದೋ ಕೆಲಸಕ್ಕಾಗಿ ಕೆಂಪು ಕಲ್ಲು ತಂದಿಟ್ಟಿದ್ರು. ಒಂದು ದಿನ ಸಂಜೆ ನಾನೂ ನನ್ನ ಗೆಳೆಯ ಇಬ್ರೂ ಸೇರ್ಕೊಂಡು ಆ ಕಲ್ಲನ್ನೆಲ್ಲ ತೊರೆಗೆ ಅಡ್ಡಲಾಗಿ ಜೋಡಿಸಿ ಅಣೆಕಟ್ಟು ರೀತಿಯಲ್ಲಿ ಕಟ್ಟಿದ್ವಿ.. ಮರುದಿನ ಬೆಳಿಗ್ಗೆ ನೋಡಿದ್ರೆ ರಸ್ತೆ ತುಂಬೆಲ್ಲ ನೀರು.. ನಾವು ಕಟ್ಟಿದ ಅಣೆಕಟ್ಟನಿಂದಾಗಿ ನೀರು ನಿಂತು ರಸ್ತೆವರೆಗೂ ನೀರು ನಿಂತು, ರಸ್ತೆಯ ಇನ್ನೊಂದು ಬದಿಯಲ್ಲಿರುವ ತೋಟಕ್ಕೂ ನೀರು ನುಗ್ಗಿತ್ತು. ಬೆಳಿಗ್ಗೆ ನಾವು ಶಾಲೆಗೆ ಹೊರಟು ರಸ್ತೆಯಲ್ಲಿ ನಡ್ಕೊಂಡು ಬರ್ಬೇಕಾದ್ರೆ, ನಾವು ಕಟ್ಟಿದ್ದ ಅಣೆಕಟ್ಟಿನ ಪಕ್ಕದ ರಸ್ತೆಯಲ್ಲಿ ವಾಹನಗಳು ಓಡಾಡೋಕೆ ಆಗದೆ ನಿಂತಿತ್ತು. ನಮಗೆ ಮನಸ್ಸಲ್ಲೇ ನಗು.. ಆದ್ರೆ ಏನೂ ಗೊತ್ತಿಲ್ಲದ ರೀತಿಯಲ್ಲಿ ನಿಂತಿದ್ವಿ. ಇವಾಗ ಅದೆಲ್ಲ ನೆನೆಸ್ಕೊಂಡಾಗ ನಗು ಬರುತ್ತೆ..
ನಾವೆಲ್ಲ ಶಾಲೆಗೆ ಹೋಗ್ತಿದ್ದಾಗ ರಸ್ತೆಯಲ್ಲಿ ಒಂದರೆಡು ಅಡಿ ನೀರು ಇರ್ತಿದ್ದಿದ್ದು ಸಾಮಾನ್ಯವಾಗಿತ್ತು. ಸಂಜೆ ಶಾಲೆ ಮುಗಿಸ್ಕೊಂಡು ವಾಪಾಸ್ ಮನೆಗೆ ಹೋಗುವಾಗ ನಮ್ಮ ಸಂಭ್ರಮ ಕೇಳೋದೇ ಬೇಡ. ಎಡಗಾಲನ್ನು ನೀರಿಗೆ ಊರಿಕೊಂಡು ಬಲಗಾಲಲ್ಲಿ ನೀರು ರಟ್ಟಿಸ್ತಾ ಇದ್ದಿದ್ದು ಪ್ರತಿದಿನದ ಕೆಲಸ.. ಕೊನೆಗೆ ಮನೆ ಸೇರುವಷ್ಟರಲ್ಲಿ ನಮ್ಮ ಬಟ್ಟೆಗಳೆಲ್ಲ ಕೆಸರಾಗಿರ್ತಿತ್ತು. ಇದಕ್ಕೆ ಅಮ್ಮನಿಂದ ಬೈಗುಳವೂ ಸಿಗ್ತಿತ್ತು. ಅಷ್ಟಾದ್ರೂ ಮರುದಿನ ಮತ್ತೆ ಹಾಗೇ ಮಾಡ್ತಿದ್ವಿ... ಇನ್ನು ಮೊದಲ ಮಳೆ ಬಂದಾಗ ಮೀನು ಹಿಡಿಯೋದು ಒಂದು ಕೆಲಸವಾಗಿತ್ತು. ಸಾಮಾನ್ಯವಾಗಿ ಜೂನ್ ತಿಂಗಳ ಮೊದಲ ಮಳೆಗೆ ಗದ್ದೆ, ತೋಟಗಳ ನೀರು ಸಮೀಪದ ತೋಡಿಗೆ ಹರಿದು ಹೋಗ್ತಿತ್ತು. ಆಗ ತೋಡಿನಲ್ಲಿರುವ ಮೀನುಗಳೆಲ್ಲ ತೋಟ, ಗದ್ದೆಗಳಿಗೆ ವಿರುದ್ಧ ದಿಕ್ಕಿನಲ್ಲಿ ಬರ್ತಿತ್ತು. ಅದು ಮೀನುಗಳು ಮೊದಲ ಮಳೆಯನ್ನು ಸಂಭ್ರಮಿಸುವ ರೀತಿ.. ನೀರಿನಿಂದ ಮೇಲಕ್ಕೆ ಹಾರುತ್ತಾ ತೋಟಕ್ಕೆ ನುಗ್ಗುವ ಮೀನುಗಳನ್ನು ಹಿಡಿಯೋದು ನಮ್ಮ ಸಂಭ್ರಮದ ಭಾಗವಾಗಿತ್ತು. ಹೆಚ್ಚೆಂದರೆ ನಾಲ್ಕೋ ಐದೋ ಮೀನುಗಳು ಸಿಗ್ತಿತ್ತು. ಆದ್ರೆ ಅದನ್ನು ಮನೆಗೆ ತಗೊಂಡು ಹೋಗಿ ಅಮ್ಮನ ಬಳಿ ಕೊಟ್ಟು ಪದಾರ್ಥ ಮಾಡಿಸಿ, ತಿನ್ನೋವರೆಗೆ ಸಮಾಧಾನ ಆಗ್ತಿರ್ಲಿಲ್ಲ. ರಜಾದಿನಗಳಲ್ಲಿ ತೋಡಿನಲ್ಲಿ ಈಜಾಡೋಕೆ ಹೋಗ್ತಿದ್ವಿ. ಆಗ ಅಪ್ಪನ ಹಳೆಯ ಪಂಚೆ ತಗೊಂಡು ಹೋಗಿ, ಅದರ ತುದಿಯನ್ನು ಎರಡೂ ಬದಿಯಲ್ಲಿ ಹಿಡ್ಕೊಂಡು ನೀರಿನಲ್ಲಿ ಮೀನು ಹಿಡೀತಿದ್ವಿ. ಅವೆಲ್ಲ ತುಂಬಾ ಸಣ್ಣಪುಟ್ಟ ಮೀನುಗಳು.. ಆ ಮೀನುಗಳನ್ನು ಪುಟ್ಟದೊಂದು ಡಬ್ಬಿಯಲ್ಲಿ ಹಾಕೊಂಡು ಮನೆಗೆ ತಗೊಂಡು ಹೋಗಿ ಬಾವಿಗೆ ಹಾಕ್ತಿದ್ವಿ. ಆಮೇಲೆ ದಿನಾ ಬಾವಿಯಲ್ಲಿ ಇಣುಕಿ ನೋಡೋದೇ ಕೆಲಸ.. ಮೀನು ದೊಡ್ಡಾದಾಗಿದ್ಯಾ ಅಂತ...
ಸಂಜೆ ಅಥವಾ ರಾತ್ರಿ ಭಾರೀ ಸಿಡಿಲು-ಗುಡುಗು ಇದ್ರೆ ಬೆಳಗಾಗೆದ್ದು ತೋಟದಲ್ಲಿ ಸುತ್ತಾಡೋದೇ ಕೆಲಸವಾಗ್ತಿತ್ತು.. ಯಾಕೆ ಗೊತ್ತಾ.. ಅಣಬೆ ಹುಡುಕೋಕೆ.. ಸಾಮಾನ್ಯವಾಗಿ ಸಿಡಿಲು-ಗುಡುಗು ಜಾಸ್ತಿ ಇದ್ದ ಮರುದಿನ ಅಣಬೆಗಳು ಹುಟ್ಟಿಕೊಳ್ತಿತ್ತು. ಅದಕ್ಕೆ ವೈಜ್ಞಾನಿಕ ಕಾರಣಗಳು ಏನಿದ್ಯೋ ಗೊತ್ತಿಲ್ಲ. ಆದ್ರೆ ನಾನಂತೂ ಮಿಸ್ ಇಲ್ದೆ ತೋಟದಲ್ಲಿ ಹುಡುಕಾಡ್ತಿದ್ದೆ. ಅಲ್ಲೊಂದು ಇಲ್ಲೊಂದು ಪುಟ್ಟ ಅಣಬೆ ಸಿಗ್ತಿತ್ತು. ಇನ್ನು ಮನೆ ಹಿಂಭಾಗಕ್ಕೆ ಇದ್ದ ಪುಟ್ಟ ಕಾಡಿನಲ್ಲಿ ಕೆಲವು ದೊಡ್ಡ ಮರಗಳ ಕೆಳಗೆ ನೂರಾರು ಸಂಖ್ಯೆಯಲ್ಲಿ ಅಣಬೆಗಳು ಹುಟ್ಟುತ್ತಿತ್ತು. ಅದನ್ನೆಲ್ಲ ಕೊಯ್ದು ಗೋಣಿ ಚೀಲದಲ್ಲಿ ಕಟ್ಕೊಂಡು ಮನೆಗೆ ಬರೋದು, ಬಿದಿರಿನ ರಾಶಿಯ ಮಧ್ಯೆ ಕಣಿಲೆ ಹುಡುಕೋದು... ಇವೆಲ್ಲ ನಮ್ಮ ಶಾಲಾ ಬದುಕಿನ ನಿತ್ಯ ಕೆಲಸಗಳಾಗಿರ್ತಿತ್ತು. ಸಂಜೆಯಾದ್ರೆ ತೋಟದ ನಡುವೆ ನವಿಲುಗಳು ಗರಿ ಬಿಚ್ಚಿ ಕುಣಿಯುತ್ತಾ ಹಾರಾಡ್ತಿತ್ತು. ಇನ್ನು ಮರಗೆಣಸು ನೆಡ್ತಿದ್ದ ಜಾಗದಲ್ಲಿ ಮೊಲಗಳ ಕಾಟ ಇರ್ತಿತ್ತು. ಮರಗೆಣಸಿನ ಗಿಡ ದೊಡ್ಡದಾಗ್ತಿದ್ದಂಗೆ ಅದರ ಎಲೆಗಳನ್ನು ತಿನ್ನೋಕೆ ಮೊಲಗಳು ಬರ್ತಿತ್ತು. ಬೆಳಗೆದ್ದು ನೋಡಿದ್ರೆ ಬಹುತೇಕ ಮರಗೆಣಸಿನ ಗಿಡಗಳಿಗೆ ಎಲೆಗಳೇ ಇರ್ತಿರ್ಲಿಲ್ಲ.. ಆಗಿನ ಕಾಲಕ್ಕೆ ಮರಗೆಣಸೇ ನಮ್ಮ ಹಸಿವನ್ನು ನೀಗಿಸ್ತಾ ಇದ್ದಿದ್ದು.. ಹಾಗಾಗಿ ಮರಗೆಣಸು ನೆಡ್ತಿದ್ದ ಜಾಗದಲ್ಲಿ ತಂತಿಯ ಉರುಳು ಇಡ್ತಿದ್ವಿ. ಉರುಳು ಅಂದ್ರೆ ಉದ್ದದ ತಂತಿಯನ್ನು ವೃತ್ತಾಕಾರದಲ್ಲಿ ಜೋಡಿಸಿ ಎರಡು ಕಡೆ ಸಣ್ಣ ಕೋಲು ನೆಟ್ಟು ಅದಕ್ಕೆ ಕಟ್ಟೋದು. ಅದರ ಅಕ್ಕಪಕ್ಕಕ್ಕೆ ಸೊಪ್ಪುಗಳನ್ನು ಹಾಕ್ತಿದ್ವಿ. ರಾತ್ರಿ ಎಲೆ ತಿನ್ನೋಕೆ ಬರುವ ಮೊಲಗಳು ಈ ಉರುಳಿನಲ್ಲಿ ಸಿಕ್ಕಿ ಹಾಕಿಕೊಳ್ತಿತ್ತು...
ಸಂಜೆ ಕ್ರಿಕೆಟ್ ಆಡೋದು ಉಳಿದೆಲ್ಲ ಕೆಲಸಗಳಿಗಿಂತ ಫೇವರೀಟ್. ಸ್ಕೂಲ್ ಮುಗಿಸ್ಕೊಂಡು ಮನೆಗೆ ಬಂದ್ರೆ ಸಾಕು... ಬ್ಯಾಗ್ ಎಲ್ಲೋ ಎಸೆದು ಹಳೆಯದೊಂದು ಡ್ರೆಸ್ ಹಾಕೊಂಡು ಗ್ರೌಂಡ್‌ಗೆ ಓಡ್ತಿದ್ವಿ. ತೋಟದಲ್ಲಿದ್ದ ನೇರವಾದ ಗಿಡಗಳೆಲ್ಲ ನಮ್ಮ ವಿಕೆಟ್‌ಗಳಾಗ್ತಿತ್ತು. ಆ ಗಿಡವನ್ನು ಕತ್ತರಿಸಿ ಸಿಪ್ಪೆ ತೆಗೆದು ಅದಕ್ಕೆ ಪೆಪ್ಸಿಯ ಸ್ಕಿಕ್ಕರ್ ಅಂಡಿಸ್ತಿದ್ವಿ. ತೀರಾ ಸಣ್ಣದಿದ್ದಾಗ ತೆಂಗಿನ ಮರದ ಗರಿಯ ಬ್ಯಾಟ್‌ಗಳು ಹೆಚ್ಚಾಗಿತ್ತು. ಬರ್ತಾ ಬರ್ತಾ ಮರದ ಬ್ಯಾಟ್‌ಗಳನ್ನು ತಯಾರಿಸೋಕೆ ಶುರು ಮಾಡಿದ್ವಿ. ಟಿವಿಯಲ್ಲಿ ಕ್ರಿಕೆಟ್ ಅಟಗಾರರು ಬಳಸುವ ರೀತಿಯಲ್ಲಿ ಆ ಬ್ಯಾಟ್‌ಗೆ ಸ್ಟಿಕ್ಕರ್ ಅಂಟಿಸಿ ಆನಂದ ಪಡ್ತಿದ್ವಿ. ರೈಟ್ ಹ್ಯಾಂಡ್ ಬ್ಯಾಟಿಂಗ್ ಮಾಡೋವ್ರು ಸಹ ಗಂಗೂಲಿ ರೀತಿಯಲ್ಲಿ ಎರಡು ಸ್ಟೆಪ್ ಮುಂದೆ ಬಂದು ಸಿಕ್ಸರ್ ಬಾರಿಸೋಕೆ ಪ್ರಯತ್ನ ಪಡ್ತಿದ್ವಿ. ಶೋಯೆಬ್ ಅಖ್ತರ್ ಬೌಲಿಂಗ್ ನೋಡಿದ ಮೇಲೆ ಗ್ರೌಂಡ್‌ನ ಬೌಂಡರಿ ಲೈನ್‌ನಿಂದನೇ ಓಡ್ಕೊಂಡು ಬಂದು ಬೌಲಿಂಗ್ ಮಾಡೋದು ಸ್ಟೈಲ್ ಆಗಿತ್ತು. ಸಂಜೆ ನಾಲ್ಕು ಗಂಟೆಗೆ ಮ್ಯಾಚ್ ಆಡೋ ಮೊದ್ಲು ತಣ್ಣಗೆ ಮಳೆ ಬಂದಿದ್ರೆ ಬೌಲರ್‌ಗಳಿಗೆ ಖುಷಿ.. ಪಿಚ್ ಬೌನ್ಸ್ ಆಗುತ್ತೆ ಅಂತ.. ಆರು ಓವರ್‌ಗಳ ಮ್ಯಾಚ್‌ ಆದ್ರೂ, ಆರು ಓವರ್ ಮುಗಿಯೋ ಮೊದ್ಲೇ ಬ್ಯಾಟ್ಸ್‌ಮನ್‌ಗಳೆಲ್ಲ ಔಟ್ ಆಗ್ತಿದ್ರು. ರಜಾ ದಿನಗಳಂದು ಬೆಳಿಗ್ಗೆಯೇ ನಮ್ಮ ಟೆಸ್ಟ್ ಕ್ರಿಕೆಟ್ ಆರಂಭವಾಗ್ತಿತ್ತು. ಅರ್ಧ ದಿನ ಆಗ್ತಿದ್ದಂಗೆ ಎರಡೂ ಕಡೆಯ ಬ್ಯಾಟ್ಸ್‌ಮನ್‌ಗಳು ಔಟ್ ಆಗಿ ಮ್ಯಾಚ್ ಮುಗ್ದೋಗ್ತಿತ್ತು. ಮನೆಗೆ ಬಂದ ಮೇಲೆ ಎಡಗೈಯಲ್ಲಿ ಗೋಡೆಗೆ ಬಾಲ್ ಎಸೆಯುತ್ತಾ ಬ್ಯಾಟಿಂಗ್ ಪ್ರಾಕ್ಟೀಸ್.. ಅಕ್ಕಪಕ್ಕದ ಯಾವುದೇ ಊರುಗಳಲ್ಲಿ ಮ್ಯಾಚ್ ಇದ್ರೂ ನಮ್ಮ ತಂಡ ಅಲ್ಲಿ ಹಾಜರಿರ್ತಿತ್ತು. ಕ್ಲಾಸ್‌ಗೆ ಚಕ್ಕರ್ ಹೊಡೆದು ಮ್ಯಾಚ್ ಆಡೋಕೆ ಹೋಗೋದೇ ಒಂದು ಮಜಾ.. ಸಾಮಾನ್ಯವಾಗಿ ಲೀಗ್ ಅಥವಾ ಕ್ವಾರ್ಟರ್ ಫೈನಲ್ ಹಂತದಲ್ಲೇ ಸೋತು ವಾಪಾಸಾಗ್ತಿದ್ವಿ. ಎಷ್ಟು ಮ್ಯಾಚ್ ಸೋತ್ರೂ ಪರ್ವಾಗಿಲ್ಲ, ಮುಂದಿನ ಬಾರಿ ಮತ್ತೆ ಟೂರ್ನಮೆಂಟ್ ಇದ್ದಾಗ ಪಾಲ್ಗೊಳ್ಳೋದನ್ನು ಮಾತ್ರ ಮಿಸ್ ಮಾಡ್ತಿರ್ಲಿಲ್ಲ.

Sunday, August 11, 2013

ನನ್ನ ಪ್ರೀತಿಯ ಹುಡುಗಿ...

ಅವಳು ಇನ್ನೆಂದಿಗೂ ನನ್ನ ಪಾಲಿಗೆ ನೆನಪು ಪಾತ್ರ.. ಈ ಹಿಂದೆಲ್ಲ ಪ್ರೀತಿ-ಪ್ರೇಮ ಅಂತೆಲ್ಲ ಸುತ್ತಾಡ್ತಿದ್ದ ನಾನು ಮೊದಲ ಬಾರಿಗೆ ನಿಷ್ಕಲಷ್ಮ ಗೆಳೆತನದ ಬೆಸುಗೆಯಲ್ಲಿ ಬಂಧಿಯಾಗಿದ್ದೆ.. ಇದು ನಾಲ್ಕು ವರ್ಷಗಳ ಹಿಂದಿನ ಕಥೆ.. ನಾನಾಯ್ತು ನನ್ನ ಪಾಡಾಯ್ತು ಅಂತ ಯಾವುದೋ ಯೋಚನೆಯಲ್ಲಿ ಮುಳುಗಿರ್ತಿದ್ದ ನನ್ನ ಬಾಳಿಗೆ ಆಕೆ ಪ್ರವೇಶ ಮಾಡಿದ್ದಳು.. ಉತ್ತಮ ಗೆಳತಿಯಾಗಿ.. ಆ ಸಂಬಂಧ ಕೊನೆವರೆಗೂ ಮುಂದುವರಿಯಿತು... ಮೊನ್ನೆ ಮೊನ್ನೆ ನನ್ನಿಂದ ದೂರವಾಗೋವರೆಗೂ...

ಗೆಳತಿಯಾಗಿ ಅವಳು ನನ್ನೊಂದಿಗಿದ್ದ ದಿನಗಳನ್ನು ಮರಿಯೋಕಾಗಲ್ಲ.. ಯಾವುದೋ ತುಂಟಾಟದಲ್ಲಿ ಆರಂಭವಾದ ಗೆಳೆತನ... ದಿನಗಳೆದಂತೆ ಗೆಳೆತನದ ಬೆಸುಗೆ ಗಟ್ಟಿಯಾಗುತ್ತಾ ಹೋಯ್ತು.. ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗೋವರೆಗೆ ಗಂಟೆಗೊಮ್ಮೆ ಆಕೆಯೊಂದಿಗೆ ಫೋನಲ್ಲಿ ಮಾತಾಡ್ತಿದ್ದೆ... ನನ್ನ ಜೀವನದ ಪುಟ್ಟ ಪುಟ್ಟ ನಿರ್ಧಾರಗಳನ್ನೂ ತೆಗೆದುಕೊಳ್ಳೋ ಮುನ್ನ ಅವಳಲ್ಲಿ ಕೇಳ್ತಿದ್ದೆ.. ಅವಳು ಹೇಳ್ತಿದ್ದುದೆಲ್ಲ ನಂಗೆ ವೇದವಾಕ್ಯವಾಗಿತ್ತು.. ಅವಳು ಹೇಳ್ತಿದ್ದುದರಲ್ಲಿ ಯಾವತ್ತೂ ಯಾವ ತಪ್ಪುಗಳೂ ಇರ್ತಿರ್ಲಿಲ್ಲ.. ಅಷ್ಟರಮಟ್ಟಿಗೆ ಅವಳು ದೃಢ ಮತ್ತು ಪಕ್ವ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಳು..

ಯಾವತ್ತೂ ನನ್ನ ಬೆಸ್ಟ್ ಫ್ರೆಂಡ್ ಅಂದ್ಕೊಂಡಿದ್ದ ಅವಳು ನನಗೆ ಕೊಟ್ಟ ಪ್ರೀತಿ, ಸ್ನೇಹ, ಕಾಳಜಿ.. ಇವಕ್ಕೆಲ್ಲ ಬೆಲೆ ಕಟ್ಟೋಕಾಗಲ್ಲ.. ನನ್ನ ಮಟ್ಟಿಗಂತೂ ಆಕೆ ಪುಟ್ಟ ಮಗುವಾಗಿದ್ದಳು. ಜೊತೆಗಿದ್ದಷ್ಟು ದಿನ ಪುಟ್ಟ ಕಂದಮ್ಮನಂತೆ ನೋಡ್ಕೊಂಡೆ.. ಆಕೆ ಗೆಳತಿಯಾಗಿ, ತಾಯಿಯ ಪ್ರೀತಿಯನ್ನೂ ಕೊಟ್ಟಳು.. ತನ್ನೆಲ್ಲ ಸುಖಃ ದುಖಃ ಗಳನ್ನು ಹಂಚಿಕೊಂಡಳು... ನನ್ನ ಮನಸ್ಸಿನ ಕನ್ನಡಿಯಾದಳು... ನಾಲ್ಕು ವರ್ಷದಲ್ಲಿ ಅವಳಿಂದ ಮುಚ್ಚಿಟ್ಟ ಸಂಗತಿಗಳೇನೂ ಇರಲಿಲ್ಲ..

ಬೇಕಾಬಿಟ್ಟಿ ಇರ್ತಿದ್ದ ನಾನು ಪರಿಪೂರ್ಣನಾಗಲು ಆಕೆ ಕಾರಣವಾದಳು.. ಯಾವುದೋ ನೋವಿನ ಗುಂಗಿನಲ್ಲಿರ್ತಿದ್ದ ನನ್ನನ್ನು ಅದರಿಂದ ಹೊರಬರುವಂತೆ ಮಾಡಿದ್ದಳು.. ನಾನು ಎಲ್ಲರಂತೆ ಎಲ್ಲರೊಂದಿಗೆ ಇರುವಂತಾಗಲು ಅವಳು ಪ್ರೇರಣೆಯಾದಳು.. ನನ್ನ ಬದುಕಿನ ದಿಕ್ಕನ್ನೇ ಬದಲಿಸಿದ ಅವಳು ನನ್ನೆಲ್ಲಾ ಯಶಸ್ಸಿನ ಬೆನ್ನೆಲುಬಾಗಿದ್ದಳು..

ತುಂಬಾ ಇಷ್ಟಪಟ್ಟಿದ್ದೆ ಅವಳನ್ನ.. ಅವಳಿಗೂ ನಾನಂದ್ರೆ ತುಂಬಾ ಇಷ್ಟನೇ ಆಗಿತ್ತು.. ಆದ್ರೆ ನಾಲ್ಕು ವರ್ಷದಲ್ಲಿ ಒಮ್ಮೆಯೂ ಆ ಇಷ್ಟಗಳು ಗೆಳೆತನದ ಪರಿಧಿ ಮೀರಿ ಹೋಗಲಿಲ್ಲ.. ಈಗ ಅವಳು ನನ್ನಿಂದ ದೂರ ಇದ್ರೂನೂ ಜೀವಮಾನ ಪೂರ್ತಿ ಮೆಲುಕು ಹಾಕಿಕೊಳ್ಳುವಷ್ಟು ನೆನಪುಗಳು ನನ್ನೊಂದಿಗಿದ್ದಾವೆ..

Monday, August 5, 2013

ಗೆಳೆತನದ ಬೆಸುಗೆ...

ಪ್ರೀತಿ ಸ್ನೇಹ ಅನ್ನೋದೆ ಹಾಗೆ.. ಯಾರ ಮೇಲೆ ಯಾವಾಗ ಬರತ್ತೆ ಅಂತ ಹೇಳೋದಿಕ್ಕಾಗಲ್ಲ.. ನಿನ್ನೆ ಮೊನ್ನೆ ಪರಿಚಯವಾದವರು ತುಂಬಾ ಬೇಗ ಮನಸ್ಸಿಗೆ ಹತ್ತಿರ ಆಗ್ತಾರೆ.. ಕೆಲವೇ ದಿನಗಳ ಮಾತುಕತೆಯೇ ಹಲವಾರು ವರ್ಷಗಳ ಪರಿಚಯದಂತೆ ಭಾಸವಾಗತ್ತೆ... ತುಂಬಾ ಮಾತಾಡ್ಬೇಕು ಅನ್ಸತ್ತೆ.. ಮನಸಲ್ಲಿರೋದನ್ನೆಲ್ಲ ಹೇಳಿ ಹಗುರಾಗಬೇಕು ಅನ್ಸತ್ತೆ.. ಜೊತೆಗಿದ್ದುಕೊಂಡು ಕೀಟಲೆ ಮಾಡ್ತಾ ಎಲ್ಲ ಮರೆತು ಖುಷಿಯಾಗಿರ್ಬೇಕು ಅನ್ಸತ್ತೆ.. ಹೀಗೆ ಹತ್ತು ಹಲವು ಕನಸುಗಳು...

ಇಂದಿನ ಯಾಂತ್ರೀಕೃತ ಬದುಕಿನಲ್ಲಿ ವೈಯಕ್ತಿಕ ಹಿತಾಸಕ್ತಿಗಳಿಗೆ ಕೊಂಚವೂ ಬೆಲೆ ಸಿಗಲ್ಲ.. ಮನುಷ್ಯ ಅಂದ್ಮೇಲೆ ಪ್ರತಿಯೊಬ್ಬನಿಗೂ ತನ್ನದೇ ಆದ ಕನಸುಗಳಿರತ್ತೆ... ನಿರೀಕ್ಷೆಗಳಿರತ್ತೆ.. ಆದ್ರೆ ನಮ್ಮ ಕನಸು, ನಿರೀಕ್ಷೆಗಳಿಗೆ ಸ್ಪಂದಿಸೋಕೆ ಖುದ್ದು ನಮಗೆ ಆಗಿಲ್ಲ ಅಂತಾದ್ರೆ ಕಷ್ಟ ಅಲ್ವಾ.. ಬದುಕಿನ ಯಾವುದೋ ಒಂದು ಘಳಿಗೆಯಲ್ಲಿ ನಾವು ತುಂಬಾ ಬ್ಯುಸಿ ಅನಿಸಿಬಹುದು.. ಅದೇ ರೀತಿ ಯಾವುದೇ ಕೆಲಸ ಕಾರ್ಯಗಳಿಲ್ಲದೆ ಸುಮ್ಮನಿದ್ದಾಗ ಯಾವುದಾದರೂ ಕೆಲಸದಲ್ಲಿ ಬ್ಯುಸಿಯಾಗಬೇಕು ಎಂದೂ ಅನ್ಸತ್ತೆ.. ಆದ್ರೆ ತುಂಬಾ ಬ್ಯುಸಿಯಾಗಿದ್ದಾಗ ಎಲ್ಲಾ ಜಂಜಾಟಗಳಿಂದ ಹೊರಗೋಡಿ ಬರಬೇಕು ಅನ್ಸೋದು ಸಹಜ.. ಯಾರೂ ಇಲ್ಲದ ಜಾಗದಲ್ಲಿ ಒಂಟಿಯಾಗಿ ಇದ್ದು ಬಿಡಬೇಕು ಅನ್ಸೋದುಂಟು... ಆದ್ರೆ ದೈನಂದಿನ ಬದುಕಿನ ಅನಿವಾರ್ಯತೆಗಳ ಮಧ್ಯೆ ಇದ್ಯಾವುದೂ ಸಾಧ್ಯವಾಗದೆ ಇದ್ದಾಗ ಕನಿಷ್ಠ ಮನಸ್ಸು ಹಗುರ ಮಾಡ್ಕೊಳ್ಳೋಕೆ ಗೆಳತಿಯೊಬ್ಬಳು ಬೇಕು ಅನ್ಸತ್ತೆ..

ತನ್ನೆಲ್ಲ ಕನಸು, ನಿರೀಕ್ಷೆಗಳು, ನೋವು ನಲಿವುಗಳಿಗೆ ಸ್ಪಂದಿಸುವ ಹುಡುಗಿ ಅವಳಾಗಿರಬೇಕು.. ಆಕೆಯೂ ನನ್ನೊಂದಿಗೆ ಹಾಗೆಯೇ ಇರಬೇಕು.. ಹೇಳಬೇಕು ಅನ್ಸಿದ್ದನ್ನು ಮನಸ್ಸು ಬಿಚ್ಚಿ ಹೇಳಬೇಕು.. ಎಲ್ಲಾ ವಿಷಯವನ್ನೂ ಮುಕ್ತವಾಗಿ ಹಂಚಿಕೊಳ್ಳುವ ಮನಸ್ಸಿರಬೇಕು.. ಪ್ರೀತಿ, ಸ್ನೇಹ, ಕಾಳಜಿಯ ಹಂದರವಿರಬೇಕು... ಆದ್ರೆ ಸಂಶಯ ಸ್ವಾರ್ಥ ಇರಬಾರದು.. ನನ್ನ ಗೆಳೆಯ ನನ್ನವನು ಅನ್ನೋ ಮನೋಭಾವ ಸ್ವಾರ್ಥವಾಗಬಾರದು..

ಗೆಳೆತನಕ್ಕಿಂತ ಮಧುರವಾದ ಸಂಬಂಧ ಮತ್ತೊಂದಿಲ್ಲ.. ಆದ್ರೆ ಸಂಬಂಧ ಮಧುರವಾಗಿರಲು ಇಬ್ಬರ ನಡುವೆ ಹೊಂದಾಣಿಕೆಯಿರಬೇಕು.. ಅರ್ಥ ಮಾಡಿಕೊಳ್ಳುವ ಗುಣವಿರಬೇಕು.. ಹೇಳಲಾಗದ್ದನ್ನು ಪರಸ್ಪರ ಮಾತನಾಡಿಕೊಳ್ಳುವ ಒಳಮನಸ್ಸು ಜಾಗೃತವಾಗಬೇಕು.. ಹಾಗಾದಾಗ ಗೆಳೆತನದ ಬೆಸುಗೆ ಮತ್ತಷ್ಟು ಗಟ್ಟಿಗೊಳ್ಳೋದ್ರಲ್ಲಿ ಸಂಶಯವಿಲ್ಲ...

Thursday, May 3, 2012

ಮಳೆಯೊಂದಿಗೆ ಅವಳು....

ಮಳೆಹನಿಗೂ ಪ್ರೀತಿಗೂ ಅವಿನಾಭಾವ ಸಂಬಂಧ ಅನ್ಸತ್ತೆ. ಪ್ರತಿಯೊಂದು ಪ್ರಣಯ ಕಥೆಗಳ ಹಿಂದೆಯೂ ಮಳೆಹನಿಯ ಸ್ಪರ್ಶಗಳಿರತ್ತೆ. ತೆಳುಗಾಳಿಯ ರೋಮಾಂಚನಗೊಳಿಸುವ ಅನುಭವಗಳಿರತ್ತೆ. ಬಾಂಧವ್ಯದ ಬೆಸುಗೆ ಹೆಣೆಯುವ ನೂರಾರು ಸುಮಧುರ ಹೆಜ್ಜೆಗಳ ಸಪ್ಪಳವಿರತ್ತೆ..

ಮಳೆ ಅಂದ್ರೆ ಹಾಗೆನೇ ಅಲ್ವಾ.. ಮಳೆಹನಿ ಮೈಮೇಲೆ ಸ್ಪರ್ಶಿಸಿದಾಗ ಉಂಟಾಗುವ ಅನುಭವನೇ ಅಂಥಾದ್ದು. ಅದು ಬೆವರ ಹನಿಗಳ ಮೇಲೆ ಮಳೆ ತೋಕಿದಾಗ ಇರಬಹುದು ಅಥವಾ ಚಳಿಗಾಳಿಗೆ ಮೈ ಬೆಚ್ಚಗೆ ಮಾಡಿಕೊಳ್ಳುವ ತವಕದಲ್ಲಿದ್ದಾಗ ಇರಬಹುದು... ಮಳೆ ಹನಿಯ ಸ್ಪರ್ಶ ವಿಶೇಷ ಅನುಭೂತಿ ನೀಡತ್ತೆ. ಅದರೊಂದಿಗೆ ಪ್ರೀತಿಯ ಸ್ಪರ್ಶವೂ ಇದ್ರೆ ಅದರ ಅನುಭವನೇ ಬೇರೆ..

ಪ್ರೀತಿಸುವ ಪ್ರತಿಯೊಬ್ಬ ಹುಡುಗನಿಗೂ ತಾನು ತನ್ನ ಹುಡುಗಿ ಜೊತೆಗೆ ಮಳೆಯಲ್ಲಿ ತೋಯಬೇಕು ಅನ್ನೋ ಆಸೆಯಿರತ್ತೆ. ಹುಡುಗಿಗೂ ಜೋರುಮಳೆಯಲ್ಲಿ ತನ್ನ ಹುಡುಗನ ಎದೆಗೊರಗಿ ನಿಲ್ಲಬೇಕೆನ್ನುವ ಕನಸುಗಳಿರತ್ತೆ. ಕೈ ಕೈ ಹಿಡಿದು ನಡೀಬೇಕು ಅನ್ನೋ ವಾಂಛೆಯಿರತ್ತೆ. ಇವೆಲ್ಲ ಪ್ರೀತಿಸೋ ಹೃದಯಗಳಲ್ಲಿ ಕನಸುಗಳಾಗಿ ಮಾತ್ರ ಉಳಿದಿರತ್ತೆ. ಕೆಲವರು ಮಾತ್ರ ತಮ್ಮ ಕನಸುಗಳನ್ನು ಈಡೇರಿಸಿಕೊಂಡಿರುತ್ತಾರೆ.

ನನ್ನ ಹುಡುಗಿ ಜೊತೆಗೆ ಮಳೆಯಲ್ಲಿ ನೆನೆಯೋ ಆಸೆ ನಂಗೂ ಇದೆ. ತುಂತುರು ಮಳೆಯೊಂದಿಗೆ ಅವಳು ನನ್ನ ಜೊತೆಯಿರಬೇಕು. ಇಳಿ ಸಂಜೆಯ ಕಾರ್ಮೋಡದ ನೆರಳಲ್ಲಿ ತಣ್ಣನೆಯ ಗಾಳಿಯೊಂದಿಗೆ, ತುಂತುರು ಮಳೆ.. ಜೊತೆಗೆ ಅವಳೂ.. ಅವಳು ಅಂಗೈ ಹಿಡಿದು ನನ್ನೊಂದಿಗೆ ಹೆಜ್ಜೆ ಹಾಕಬೇಕು. ಮಳೆನೀರಿನಲ್ಲಿ ಕಾಲು ತೋಯಿಸುತ್ತಾ ಆಟವಾಡಬೇಕು. ಪರಸ್ಪರ ನೀರೆರಚಿ ಸಂಭ್ರಮಿಸಬೇಕು. ಮಳೆಹನಿ ಮೈ ತಣ್ಣಗಾಗಿಸಿದಾಗ ನನ್ನೆದೆಯಲ್ಲಿ ಮುಖ ಹುದುಗಿಸಿ ಬಿಗಿದಪ್ಪಿ ನಿಲ್ಲಬೇಕು. ಪುಟ್ಟ ಕಂದಮ್ಮನನ್ನು ಎದೆಗೊರಗಿಸಿ ನಿಂತ ತಾಯಿಯಂತೆ ನಾನಾಕೆಯ ತಲೆ ನೇವರಿಸಬೇಕು. ಮಳೆಹನಿಗಳ ಸ್ಪರ್ಶದೊಂದಿಗೆ ನಾನಾಕೆಯ ಹಣೆಮೇಲೊಂದು ಸಿಹಿ ಮುತ್ತು ನೀಡಬೇಕು. ಅದು ಮಳೆಹನಿಗೂ ಮಿಗಿಲಾದ ಅನುಭೂತಿ ನೀಡಬೇಕು. ಕೊನೆಯುಸಿರವರೆಗೂ ಜೊತೆಗಿರುವ ಹೃದಯಗಳಿಗೆ ಆಸರೆಯ ಬೆಸುಗೆಯಾಗಬೇಕು... ಅಕ್ಕರೆಯ ನೇವರಿಕೆಯಾಗಬೇಕು.

ಹಸಿರು ರಾಶಿಯ ಕಾಲು ದಾರಿಯಲ್ಲಿ ಮಳೆಯ ಸ್ಪರ್ಶದೊಂದಿಗೆ ಅವಳ ಜೊತೆಗೆ ಹೆಜ್ಜೆ ಹಾಕಬೇಕು. ಅವಳ ಕಾಲು ಸೋತಷ್ಟೂ ದೂರ. ಬಳಿಕ ನಾನಾಕೆಯನ್ನು ಪುಟ್ಟ ಮಗುವಿನಂತೆ ಎದೆಗೆ ಬಿಗಿದಪ್ಪಿ ನಡೆಯಬೇಕು. ಮುಸ್ಸಂಜೆಯ ಇಳಿಹೊತ್ತಿನಲ್ಲಿ ನಾವಿಬ್ಬರೇ ಇರಬೇಕು. ಹೆಜ್ಜೆ ಸೋತಾಗ ಅವಳೊಂದಿಗೆ ಯಾವುದಾದರೂ ಮರದ ಬುಡದಲ್ಲಿ ಕೂರಬೇಕು. ಆಕೆಯನ್ನು ಮಡಿಲಲ್ಲಿ ಮಗುವಿನಂತೆ ಮಲಗಿಸಬೇಕು. ಮಳೆ ಹನಿಗಳ ಸ್ಪರ್ಶದೊಂದಿಗೆ ಮುಖದ ಮೇಲೆ ಬಿದ್ದಿರೋ ಮುಂಗುರುಳ ಸೋಕಬೇಕು. ಅರಳು ಹುರಿವಂತ ಅವಳ ಮಾತುಗಳಿಗೆ ಕಿವಿಗೊಡಬೇಕು. ಅವಳ ನಿರೀಕ್ಷೆಗಳಿಗೆ ಸ್ಪಂದಿಸಬೇಕು. ಅವಳ ತುಂಟಾಟಕ್ಕೆ ಸಾಥ್ ನೀಡಬೇಕು. ಅವಳೆಲ್ಲಾ ಕನಸುಗಳನ್ನು ಸಾಕಾರಗೊಳಿಸಲು ಪ್ರಯತ್ನಿಸಬೇಕು. ಮತ್ತೆ ಪ್ರೀತಿಸಬೇಕು.. ಪ್ರೀತಿಸಿ ಪ್ರೀತಿಸಿ ಪ್ರೀತಿಸಬೇಕು... ಪ್ರೀತಿಯ ಜೊತೆಗೆ ಅಕ್ಕರೆ, ಕಾಳಜಿಯ ಸ್ಪರ್ಶ ನೀಡಬೇಕು. ತಾನು ಪ್ರೀತಿಸಿದ್ದು ತಪ್ಪಲ್ಲ. ತನ್ನ ಪ್ರೀತಿಗೆ ಅರ್ಥವಿದೆ. ನೂರು ಜನ್ಮ ಎದ್ದು ಬಂದ್ರು ತನ್ನ ಪ್ರೀತಿ ಅವಳಿಗೆ ಬೇಕು ಅನಿಸಬೇಕು. ತಾನು ಪ್ರೀತಿಸೋ ಹುಡುಗ ತನ್ನವನು ಮಾತ್ರ.. ತನ್ನನ್ನು ಮಾತ್ರ ಪ್ರೀತಿಸಬೇಕು ಅನ್ನೋ ಸ್ವಾರ್ಥ ಇರಬೇಕು. ಇವೆಲ್ಲದರ ಜೊತೆಗೆ ನಿಷ್ಕಲಶ್ಮವಾಗಿ ಅವಳು ನನ್ನನ್ನು ಪ್ರೀತಿಸಬೇಕು...

ನನ್ನೆಲ್ಲ ಕನಸುಗಳಿಗೆ ಸ್ಪಂದಿಸುವ ಹುಡುಗಿ ಇರಬಹುದಾ.. ಇದ್ರೂ ಆಕೆ ನನ್ನವಳಾಗಬಹುದಾ.. ನನ್ನವಳಾದ್ರೆ ತುಂಬಾ ಖುಷಿಪಡ್ತೀನಿ. ಎಲ್ಲಕ್ಕಿಂತ ಮಿಗಿಲಾಗಿ ಅವಳನ್ನು ತುಂಬಾ ತುಂಬಾ ಪ್ರೀತಿಸ್ತೀನಿ..

Thursday, April 5, 2012

ಮೊದಲ ಪ್ರೀತಿ...

ಅಪಕ್ವ ಮನಸ್ಸಿನಲ್ಲಿ ಮೊಳಕೆಯೊಡೆದಿದ್ದ ಮೊದಲ ಪ್ರೀತಿ.. ನಾನಾಗ ಫಸ್ಟ್ ಪಿಯುಸಿಗೆ ಕಾಲಿಟ್ಟಿದ್ದೆ. ಕಾಲೇಜು ಜೀವನದ ಆರಂಭದ ದಿನಗಳು.. ಮೊದಲ ಮಳೆಯ ಜೊತೆಗೆ ಪುಟ್ಟದೊಂದು ಬ್ಯಾಗ್ ಬೆನ್ನಿಗೆ ನೇತಾಡಿಸಿಕೊಂಡು ಕಾಲೇಜಿಗೆ ಹೊರಟಿದ್ದೆ. ಭೋರ್ಗರೆಯುವ ಮಳೆಯನ್ನೂ ಲೆಕ್ಕಿಸದೆ ಅಪ್ಪ ಕೊಡಿಸಿದ ಹೊಸ ಕೊಡೆಯೊಂದಿಗೆ ಮಳೆ ಹನಿಯೊಂದಿಗೆ ಚೆಲ್ಲಾಟವಾಡ್ತಾ ಕಾಲೇಜಿಗೆ ಹೋಗೋದೆ ಹೊಸ ಅನುಭವವಾಗಿತ್ತು. ಅಂದಿನವರೆಗೆ ಯುನಿಫಾರ್ಮ್ ನಲ್ಲೇ ಸ್ಕೂಲ್ ಗೆ ಹೋಗ್ತಿದ್ದ ನನಗೆ ಕಲರ್ ಕಲರ್ ಡ್ರೆಸ್ ನಲ್ಲಿ ಕಾಲೇಜಿಗೆ ಹೋಗೋದು ವಿಶೇಷವಾಗಿತ್ತು.

ಕಾಲೇಜು ಎಂಟ್ರೆನ್ಸ್ ತಲುಪ್ತಿದ್ದಂಗೆ ಕೊಡೆ ಮಡಚಿ ಒದ್ದೆ ಬಟ್ಟೆಯೊಂದಿಗೆ ಕ್ಲಾಸ್ ಹುಡುಕುವ ಕೆಲಸ ಆರಂಭವಾಗಿತ್ತು. ಕೊನೆಗೂ 0-26 ಕ್ಲಾಸನ್ನು ಹುಡುಕೋದ್ರಲ್ಲಿ ಸಫಲನಾಗಿದ್ದೆ. ಮೊದಲ ದಿನದ ನೆನಪುಗಳೊಂದಿಗೆ ಒಂದು ವಾರ ಕಳೆದಿದ್ದೆ. ವಾರದ ಬಳಿಕ ನನ್ನ ಕಣ್ಣಿಗೆ ಕಾಣಿಸಿದ್ದೇ ಆ ಸುಂದರ ಕುವರಿ. ಹೆಸರು ಗೊತ್ತಿಲ್ಲ, ಊರು ಗೊತ್ತಿಲ್ಲ. ಆದ್ರೆ ಪ್ರತಿದಿನ ಅವಳನ್ನು ನೋಡ್ತಿದ್ದೆ. ಅವಳಿಗೊಂದು ಸ್ಮೈಲ್ ಕೊಡೋಕೆ ಕಾಯ್ತಿದ್ದೆ. ಆದ್ರೆ ಆಕೆ ಯಾವ ಹುಡುಗರ ಮುಖವನ್ನೂ ನೋಡ್ತಿರ್ಲಿಲ್ಲ. ನನ್ನ ಕಡೆಗಂತೂ ಅಪ್ಪಿ ತಪ್ಪಿಯೂ ನೋಡ್ತಿರ್ಲಿಲ್ಲ.

ಕೊನೆಗೂ ಕ್ಲಾಸ್ ನಲ್ಲಿ ಅಟೆಂಡೆನ್ಸ್ ಹಾಕೋವಾಗ ಅವಳ ಹೆಸರನ್ನು ಗಮನಿಸಿದ್ದೆ. ನನ್ನ ಮಟ್ಟಿಗಂತೂ ವಿಶೇಷವಾದ ಹೆಸರು. ಆ ಹೆಸರನ್ನು ತುಂಬಾನೇ ಪ್ರೀತ್ಸೋಕೆ ಶುರು ಮಾಡಿದ್ದೆ. ನಿಧಾನಕ್ಕೆ ಆ ಹೆಸರಿನ ಮೇಲಿದ್ದ ಪ್ರೀತಿ ಆಕೆಯ ಮೇಲಾಯ್ತು. ಪ್ರತಿದಿನ ಕಾಲೇಜಿಗೆ ಬರ್ತಿದ್ದಂಗೆ ಅವಳನ್ನೊಮ್ಮೆ ನೋಡೋಕೆ ಕಾಯ್ತಿದ್ದೆ. ಅವಾಗಷ್ಟೇ ಕ್ಲಾಸ್  ಬಂಕ್ ಮಾಡೋದನ್ನು ಕಲಿತಿದ್ದ ನಾನು ಆಕೆಗೋಸ್ಕರ ಕ್ಲಾಸ್ ಗೆ ಹೋಗೋಕೆ ಶುರು ಮಾಡಿದ್ದೆ.

ವಾರಗಳು ತಿಂಗಳುಗಳಾಯ್ತು. ಅವಳನ್ನು ಹುಚ್ಚನಂತೆ ಪ್ರೀತ್ಸೋಕೆ ಶುರು ಮಾಡಿದ್ದೆ. ಫಸ್ಟ್ ಇಯರ್ ಪಿಯುಸಿ ಮುಗಿಯಿತು. ನೋಡ ನೋಡ್ತಿದ್ದಂಗೆ ಸೆಕೆಂಡ್ ಇಯರ್ ಪಿಯುಸಿಯ ಕೊನೆಯ ದಿನಗಳು ಸಮೀಪಿಸಿದ್ವು. ಫೈನಲ್ ಎಕ್ಸಾಂ ಟೈಮ್ ನಲ್ಲಿ ನಂಗೆ ಭಯ ಶುರುವಾಗಿತ್ತು. ಎಕ್ಸಾಂ ಬಗ್ಗೆಯಲ್ಲ.. ಬದಲಾಗಿ ಆಕೆಯ ಬಗ್ಗೆ. ಸೆಕೆಂಡ್ ಪಿಯುಸಿ ನಂತ್ರ ಆಕೆ ಡಿಗ್ರಿಗಾಗಿ ಮತ್ತೆ ನಮ್ಮ ಕಾಲೇಜಿಗೆ ಬರ್ತಾಳೋ, ಇಲ್ಲಾ ಮನೆಯಲ್ಲೇ ಬಿದ್ದಿರ್ತಾಳೋ ಅಂತ... ಏನಪ್ಪಾ ಮಾಡೋದು ಅಂತ ತುಂಬಾನೇ ತಲೆಕೆಡಿಸಿಕೊಂಡಿದ್ದೆ. ಆದ್ರೆ ಹಾಗಂತ ಅವಳಲ್ಲಿ ಇದ್ಯಾವುದನ್ನೂ ಕೇಳೋ ಹಾಗೂ ಇಲ್ಲ. ಯಾಕಂದ್ರೆ ನಾವಿಬ್ರೂ ಮಾತಾಡ್ತಾನೇ ಇರ್ಲಿಲ್ಲ.

ಕೊನೆಗೆ ಪಿಯುಸಿ ಎಕ್ಸಾಂ ಮುಗಿಯಿತು. 2 ತಿಂಗಳು ರಜೆ ಇತ್ತು. ಆ ಟೈಮ್ ನಲ್ಲಂತೂ ಆಕೆಯನ್ನು ನೋಡೋಕಾಗ್ದೆ ಪರದಾಡ್ತಿದ್ದೆ. ರಿಸಲ್ಟ್ ನವತ್ತು ಆಕೆ ಮತ್ತೆ ಕಾಲೇಜಿಗೆ ಬಂದಿದ್ಳು. ಆಕೆಯನ್ನು ನೋಡಿದ ಖುಷಿ ಇವತ್ತಿಗೂ ನೆನಪಿದೆ.

ನಂಗೆ ತುಂಬಾ ಖುಷಿ ಅನ್ಸಿದ್ದು ಅಂದ್ರೆ ಫಸ್ಟ್ ಇಯರ್ ಡಿಗ್ರಿಗೆ ಅಡ್ಮಿಷನ್ ಮಾಡೋಕೆ ಬಂದವತ್ತು. ಅಂದು ಆಕೆಯೂ ತನ್ನ ತಾಯಿ ಜೊತೆಗೆ ಕಾಲೇಜಿಗೆ ಬಂದಿದ್ಳು. ನಾನು ಜರ್ನಲಿಸಂ ಕಾಂಬಿನೇಷನ್ ಚೂಸ್ ಮಾಡಿದ್ದೆ. ಆಕೆಯಾದ್ರೋ ಹಿಸ್ಟರಿಗೆ ಮೊರೆ ಹೋಗಿದ್ಳು. ಆದ್ರೂ ಒಂದೇ ಕಾಲೇಜಲ್ಲಿ ಪ್ರತಿದಿನ ನೋಡ್ಬೋದಲ್ವಾ ಅನ್ನೋ ಖುಷಿ ನನ್ನಲ್ಲಿತ್ತು.

ಮುಂದಿನ ದಿನಗಳು ನನ್ನ ಪಾಲಿಗೆ ತುಂಬಾನೇ ಸಂತಸ ತಂದಿತ್ತು. ಪ್ರತಿದಿನ ಕಾಲೇಜಿಗೆ ಬಂದು ಆಕೆಯ ಮುಖವನ್ನೊಮ್ಮೆ ನೋಡಿಯೇ ನಾನು ನನ್ನ ಕ್ಲಾಸ್ ರೂಂಗೆ ಹೋಗ್ತಿದ್ದೆ. ಹೀಗೆ ಮತ್ತೆರಡು ವರ್ಷಗಳು ಕಳೆದವು. ನನ್ನ ವನ್ ವೇ ಪ್ರೀತಿ ನಾಲ್ಕನೇ ವರ್ಷಕ್ಕೆ ಕಾಲಿಟ್ಟಿತ್ತು. ಕೊನೆಗೆ ನನ್ನ ಪ್ರೀತಿಯನ್ನು ಅವಳ ಮುಂದೆ ಹೇಳ್ಬೇಕು ಅಂತ ಡಿಸೈಡ್ ಮಾಡಿದ್ದೆ. ಅದೊಂದು ದಿನ ಧೈರ್ಯ ಮಾಡಿ ಆಕೆಯನ್ನು ನನ್ನ ಕ್ಲಾಸ್ ರೂಂಗೆ ಕರೆದು ನಾನಿನ್ನ ಇಷ್ಟಪಡ್ತೀನಿ, ಮದುವೆಯಾಗ್ಬೇಕು ಅಂದ್ಕೊಂಡಿದ್ದೀನಿ ಅಂತ ಹೇಳಿದ್ದೆ. ಆದ್ರೆ ಆಕೆ ಒಲ್ಲೆ ಅಂದಿದ್ದಳು. ಮನೆಯಲ್ಲಿ ಗೊತ್ತಾದ್ರೆ ಪ್ರಾಬ್ಲಂ ಆಗತ್ತೆ, ಸೋ ಬೇಡ.. ದಯವಿಟ್ಟು ನನ್ನು ಮರೆತು ಬಿಡು ಅಂತ ಹೇಳಿದ್ಳು..

ಪ್ರಥಮ ಚುಂಬನಂ ದಂತಭಗ್ನಂ ಅನ್ನೋ ಪರಿಸ್ಥಿತಿ ಉಂಟಾಗಿತ್ತು. ನಾನ್ಯಾವತ್ತೂ ಆಕೆ ನನ್ನನ್ನು ರಿಜೆಕ್ಟ್ ಮಾಡ್ತಾಳೆ ಅನ್ನೋ ನೆಗೆಟೀವ್ ಯೋಚನೆಯನ್ನೇ ಇಟ್ಕೊಂಡಿರ್ಲಿಲ್ಲ. ಅಂತಾದ್ರಲ್ಲಿ ಆಕೆಯ ಮಾತು ಕೇಳಿದಾಗ ತುಂಬಾ ನೋವಾಗಿತ್ತು. ಅದನ್ನು ಅರಗಿಸಿಕೊಳ್ಳೋಕೆ ವಾರಗಳು, ತಿಂಗಳುಗಳೇ ಬೇಕಾಯ್ತು. ಕ್ಲಾಸ್ ಮೇಟ್ಸ್ ಗಳಿಂದ ದೇವದಾಸ್ ಅನ್ನೋ ಬಿಟ್ಟಿ ಪಟ್ಟವೂ  ಸಿಕ್ಕಿತ್ತು...

ಮೊದಲ ಪ್ರೀತಿಯ ನೆನಪುಗಳು ಯಾವತ್ತಿದ್ರೂ ಮರೆತು ಹೋಗಲ್ಲ. ಅವು ಸದಾಕಾಲ ನೆನಪಿನಲ್ಲುಳಿಯತ್ತೆ. ಇವತ್ತಿಗೂ ನನ್ನ ಮೊದಲ ಇ ಮೇಲ್ ಐಡಿಯ ಪಾಸ್ ವರ್ಡ್ ಅವಳ ಹೆಸರೇ ಇದೆ. ನಾನು ಸೆಕೆಂಡ್ ಪಿಯುಸಿನಲ್ಲಿದ್ದಾಗ ಕ್ರಿಯೇಟ್ ಮಾಡಿದ ಇ ಮೇಲ್ ಐಡಿ...

ಅವಳ ನೆನಪುಗಳು, ಅವಳೊಂದಿಗಿನ ಕನಸುಗಳು... ನೆನಪುಗಳ ಬುತ್ತಿಯಲ್ಲಿ ಭದ್ರವಾಗಿದೆ. ಅವಳಿಗೆ ನಾನಿವಾಗ ನೆನಪಿರ್ಲಿಕ್ಕಿಲ್ಲ. ಯಾಕಂದ್ರೆ ಅವಳು ಮದುವೆಯಾಗಿ ಮೂರು ವರ್ಷಗಳೇ ಕಳೆದಿವೆ. ಸುಂದರ ಸಂಸಾರದ ನೌಕೆಯಲ್ಲಿ ಖುಷಿಯಾಗಿದ್ದಾಳೆ ಅಂದ್ಕೊಂಡಿದ್ದೀನಿ..  ಯಾವತ್ತೂ ಖುಷಿಯಾಗಿರ್ಲಿ...

Friday, March 16, 2012

ನನ್ನ ಕನಸು...



ಒಂದು ಮುಂಜಾವಿನಲಿ ಕಂಡ ಸುಂದರ ಕಸನು... 
ಮುದ್ದು ಮುಖದ ಹುಡುಗಿ..
ಪ್ರೀತಿಸೋಕೆ ಮಾತ್ರ ಗೊತ್ತಿರೋ ನಿಷ್ಕಲಷ್ಮ ಮನಸ್ಸು.. 
ಪರಿಚಯ ಗೆಳೆತನಕ್ಕೆ ತಿರುಗಿದಾಗ ಮೊಗದಲ್ಲಿ ನಗು.. 
ಮನದಲ್ಲಿ ಸಣ್ಣದೊಂದು ಸಂತಸ ಮಿಂಚಿ ಮರೆಯಾಗಿತ್ತು..
ಮುಂದೆ ಗೆಳೆತನವನ್ನು ಮೀರಿ ನಿಂತ ಸ್ನೇಹದ ಬೆಸುಗೆ...
ಮೌನವನ್ನೂ ಮರೆಮಾಚುವ ಪಿಸುಗುಟ್ಟುವಿಕೆ... 
                                             ದಿನಗಳು, ವಾರಗಳು, ವರ್ಷಗಳೇ ಕಳೆದು ಹೋದವು...
ಸ್ನೇಹದ ಬೆಸುಗೆ ಸಡಿಲವಾಗದಷ್ಟು ಬಿಗಿಯಾಯ್ತು.. 
ಪ್ರೀತಿಸೋ ಮನಸ್ಸು ಮತ್ತಷ್ಟು ಭಾವನಾತ್ಮಕವಾಯ್ತು..
ಆದ್ರೆ ಅಷೊತ್ತಿಗೆ ಕನಸು ಮುರಿದು ಬಿದ್ದಿತ್ತು.. 
ಮೈಕೊಡವಿಯೆದ್ದಾಗ ಆಕೆ ಬಹುದೂರ ಸಾಗಿದ್ದಳು... 
ಕನಸು ಅಂತ್ಯವಾಗಿತ್ತು.. ಪ್ರೀತಿ ದೂರವಾಗಿತ್ತು... 
ಮತ್ತೊಮ್ಮೆ ಆ ಕನಸು ಅವಳೊಂದಿಗೆ ಬರಬಾರದೆ...